ಪ್ರೀತಿ ನಿರಾಕರಿಸಿದ್ದ ಯುವತಿಯ ಮೇಲೆ ಯುವಕನ ಸಹೋದರ ಚಾಕುವಿನಿಂದ ಹಲ್ಲೆ: ಯುವತಿ ಸಾವು
Views: 25
ಕನ್ನಡ ಕರಾವಳಿ ಸುದ್ದಿ: ಪ್ರೀತಿ ನಿರಾಕರಿಸಿದ್ದ ಯುವತಿಯ ಮೇಲೆ ಯುವಕನ ಸಹೋದರ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ನಡೆದಿದೆ.
ಜುಲೈ 13ರ ಸಂಜೆ ಅಮೃತಳ ಮನೆ ಸಮೀಪಕ್ಕೆ ಬಂದ ಸೂರ್ಯ ಎಂಬಾತನು ಗಲಾಟೆ ನಡೆಸಿ, ಆಕೆಯ ಬೆನ್ನು ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಮೃತಳನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಗಾಯಗೊಂಡಿದ್ದ ಅಮೃತ ಚಿಕಿತ್ಸೆ ಫಲಕಾರಿಯಾಗದೇ ಜುಲೈ 15ರ ಸಂಜೆ ಮೃತಪಟ್ಟಿದ್ದಾಳೆ.
ತನಿಖೆಯಲ್ಲಿ ಅಮೃತ ಮತ್ತು ಧನುಷ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಇಬ್ಬರ ಕುಟುಂಬಗಳಿಗೂ ಓಂ ಶಕ್ತಿ ಮಾಲೆ ಧರಿಸುವ ಸಂದರ್ಭದಲ್ಲೇ ಪರಿಚಯವಾಗಿ ನಂತರ ಅದು ಆತ್ಮೀಯ ಸಂಬಂಧವಾಗಿ ಬೆಳೆಯಿತು. ಧನುಷ್ ಈಗಾಗಲೇ ಮದುವೆಯಾಗಿದ್ದು, ವಿಚ್ಛೇದನ ಪಡೆದಿರುವುದರ ಜೊತೆಗೆ ಒಂದು ಮಗು ಇರುವ ವಿಚಾರವನ್ನು ಅಮೃತರಿಂದ ಮುಚ್ಚಿಟ್ಟಿದ್ದನು. ಈ ವಿಷಯ ತಿಳಿದ ಬಳಿಕ ಅಮೃತ ಧನುಷ್ನಿಂದ ದೂರವಾಗಿದ್ದಳು.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಅಮೃತ ಮೇಲೆ ಧನುಷ್ನ ಸಹೋದರ ಸೂರ್ಯ ಚಾಕುವಿನಿಂದ ಹಲ್ಲೆ ನಡೆಸಿದ್ದು, 3 ದಿನಗಳ ಚಿಕಿತ್ಸೆಯ ಬಳಿಕ ಅಮೃತ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಧನುಷ್ ಮತ್ತು ಸೂರ್ಯರನ್ನು ಜೀವನ್ ಬಿಮಾನಗರ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.






