ಸಿಇಟಿ ಪರೀಕ್ಷೆ ಬರೆದು ಮನೆಗೆ ತೆರಳುತ್ತಿದ್ದ ವೇಳೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು
Views: 38
ಕನ್ನಡ ಕರಾವಳಿ ಸುದ್ದಿ: ಕಾರ್ಕಳ ನಿಟ್ಟೆಯ ಕಾಲೇಜು ಬಳಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ನವೀನ್ಚಂದ್ರ ಮೂಲ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಮಗಳು ಪ್ರೇರಣಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಆಕೆಯೂ ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಏ .24 ರಂದು ಸಿಇಟಿ ಪರೀಕ್ಷೆ ಬರೆದು ಬಸ್ ನಲ್ಲಿ ಬಂದ ಮಗಳನ್ನು ನವೀನ್ಚಂದ್ರ ಅವರು ಬೈಕಿನಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ನಿಟ್ಟೆ ಕಾಲೇಜು ಬಳಿಯ ಪೆಟ್ರೋಲ್ ಬಂಕ್ ಬಳಿಯ ಬಜಕಳ ಕ್ರಾಸ್ ಬಳಿ ದುರ್ಘಟನೆ ಸಂಭವಿಸಿದೆ.
ಕಾರ್ಕಳದಿಂದ ನಿಟ್ಟೆ ಕಡೆಗೆ ಯಮ ವೇಗದಲ್ಲಿ ನುಗ್ಗಿ ಬಂದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿದ್ದ ಕಾರು ನೇರವಾಗಿ ನವೀನ್ ಚಂದ್ರ ಅವರು ಚಲಾಯಿಸುತ್ತಿದ್ದ ಬೈಕಿಗೆ ಅಪ್ಪಳಿಸಿದೆ. ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ನವೀನ್ಚಂದ್ರ ಅವರು ರಸ್ತೆಗೆ ಎಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟಿದ್ದರು.
ಮಗಳು ಪ್ರೇರಣಾ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಈ ಅಪಘಾತಕ್ಕೆ ಕಾರಣರಾದ ವಿದ್ಯಾರ್ಥಿಗಳ ವಿರುದ್ದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇತ್ತ ಪತಿ ಹಾಗೂ ಮಗಳನ್ನು ಕಳದುಕೊಂಡ ತಾಯಿ ಹಾಗೂ ಅವರ ಸಂಬoಧಿಕರ ನೋವು ಆಕ್ರಂದನ ಮುಗಿಲುಮುಟ್ಟಿದೆ. ಅಮಾಯಕರ ಪ್ರಾಣ ತೆಗೆದ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಯಾಗಬೇಕೆನ್ನುವುದು ಎಲ್ಲರ ಆಗ್ರಹವಾಗಿದೆ.
ವಿದ್ಯಾರ್ಥಿಗಳ ಅಜಾಗರೂಕತೆ ಮತ್ತು ಬೇಜವಾಬ್ದಾರಿತನದ ಚಾಲನೆಗೆ ಒಂದೇ ಮನೆಯ ಇಬ್ಬರು ಬಲಿಯಾಗಿರುವುದು ಸ್ಥಳೀಯರ ಮತ್ತು ಸಂಬಂಧಿಕರ ಆಕ್ರಂದನಕ್ಕೆ ಕಾರಣವಾಗಿದೆ.






