ಶಿಕ್ಷಣ

ಬಿದ್ಕಲ್ ಕಟ್ಟೆ ಪ್ರೌಢ ಶಾಲೆ:ಬಾಲ್ಯ ಮಿಲನ ಮತ್ತು ಗುರುವಂದನೆ ಕಾರ್ಯಕ್ರಮ

Views: 115

ಕನ್ನಡ ಕರಾವಳಿ ಸುದ್ದಿ: ಬಿದ್ಕಲ್ ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ 2000 ಮತ್ತು 2001ನೇ ಎಸ್.ಎಸ್.ಎಲ್.ಸಿ ಬ್ಯಾಚಿನ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ 25 ವರ್ಷಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ಉದ್ದೇಶದಿಂದ ಬಾಲ್ಯ ಮಿಲನ ಮತ್ತು ಗುರುವಂದನಾ ಎಂಬ ಅಭೂತಪೂರ್ವ ಕಾರ್ಯಕ್ರಮವನ್ನು ತಾವು ಕಲಿತ ಶಾಲೆಯಲ್ಲಿ ಎಪ್ರಿಲ್ 25 ರಂದು ಹಮ್ಮಿಕೊಂಡಿರುತ್ತಾರೆ. ಆವಾಗ 120 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು ಈ ದಿನ ದೇಶ ವಿದೇಶಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ತಾವೆಲ್ಲರೂ ಒಂದು ದಿನ ಒಟ್ಟಾಗಿ ಕಳೆದು ಹಿಂದಿನ ನೆನಪನ್ನು ಮರುಕಳಿಸುವ ಉದ್ದೇಶ ತಮಗೆ ವಿದ್ಯೆ ಧಾರೆಯೆರೆದ ಗುರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಿದ್ದರು.

ಆವಾಗ ಇದ್ದ 120 ವಿದ್ಯಾರ್ಥಿಗಳಲ್ಲಿ ಸುಮಾರು 80 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭ  ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಎಲ್ಲಾ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಮಾಡಿ ಗೌರವಿಸಿದರು. ಈವಾಗ ಸ್ವರ್ಗಸ್ಥರಾಗಿರುವ ಅಧ್ಯಾಪಕರುಗಳಾದ ಸರ್ವೋತ್ತಮ ಹೆಗ್ಡೆ, ಪರಶಿವ ಮೂರ್ತಿ, ಎಸ್.ವಿ ಖಾನಾಪುರ ಅವರ ಕುಟುಂಬದವರನ್ನು ಕರೆಯಿಸಿ ಅವರ ಪರವಾಗಿ ಸನ್ಮಾನಿಸಿ ನಂತರ ಭಾವಪೂರ್ಣವಾಗಿ ಅವರನ್ನು ನೆನಪಿಸಿ ನುಡಿನಮನ ಸಲ್ಲಿಸಲಾಯಿತು. ,

ಆ ಸಂದರ್ಭದಲ್ಲಿದ್ದು ಇದೀಗ ನಿವೃತ್ತರಾದ ಸೂಲಿಯಣ್ಣ ಶೆಟ್ಟಿ, ಎಸ್. ಭಾಸ್ಕರ ಹೆಗ್ಡೆ, ಶ್ರೀ ಮೋಹನ್ ರಾವ್ ಇವರನ್ನು ಹಾಗೂ ಈಗ ವೃತ್ತಿಯಲ್ಲಿರುವ ಉದಯಕುಮಾರ ಶೆಟ್ಟಿ ಕಾಳಾವರ, ಶ್ರೀ ಕರುಣಾಕರ ಶೆಟ್ಟಿ ಮೊಗೆಬೆಟ್ಟು, ಸರೋಜ ಕಾಮತ್, ಜ್ಯೋತಿ ಶೆಟ್ಟಿ, ಸಂಪಾವತಿ, ಸವಿತಾ ಇವರನ್ನು ಎಲ್ಲಾ ವಿದ್ಯಾರ್ಥಿಗಳು ಭಕ್ತಿ ಪೂರ್ವಕವಾಗಿ ಸನ್ಮಾನಿಸಿದರು.

ಗೌರವ ಸ್ವೀಕರಿಸಿರುವ ಎಲ್ಲಾ ಅಧ್ಯಾಪಕರುಗಳು ಆ ಕಾಲದ ನೆನಪುಗಳನ್ನು ಹಂಚಿಕೊಳ್ಳುವುದರೊಂದಿಗೆ ಮನದಾಳದಲ್ಲಿ ಉಳಿಯುವ ಇಂತಹ ಕಾರ್ಯಕ್ರಮ ಮಾಡಿದ ಬಗ್ಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳನ್ನು ಹರಸಿದರು.

ಹಿಂದಿನ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಿಂದಿನ ನೆನಪುಗಳನ್ನು ಹಾಗೂ ತಮ್ಮ ಈಗಿನ ವೃತ್ತಿಯ ಬಗ್ಗೆ ಗುರುಗಳು ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡರು, ತಾವು ಕಲಿತ ಶಾಲೆಗೆ ಇದೇ ಬ್ಯಾಚಿನವರು ಹಿಂದೆ ಅನೇಕ ರೀತಿ ದೇಣಿಗೆ ನೀಡಿದ್ದು ಇದೀಗ ಶಾಲಾ ಸಭಾಭವನಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವುದಾಗಿ ತಿಳಿಸಿರುತ್ತಾರೆ.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಂತೋಷದಿಂದ ಬೆರೆತು ಅನುಭವ ಹಂಚಿಕೊಂಡರು,

ಹಳೆ ವಿದ್ಯಾರ್ಥಿಯಾದ ಬಾಲಾಜಿ ಮೆಟಲ್ಸ್ ಬೆಂಗಳೂರು ಇದರ ಮುಖ್ಯಸ್ಥರಾದ ರವಿ ಕುಲಾಲ ಮೊಳಹಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಗಣೇಶ ಕುಮಾರ ಶೆಟ್ಟಿ ಸ್ವಾಗತಿಸುವುದರೊಂದಿಗೆ ಎಲ್ಲಾ ಗುರುಗಳ ವ್ಯಕ್ತಿತ್ವದ ಕುರಿತು ಮೆಲುಕು ಹಾಕಿದರು. ಅಧ್ಯಾಪಕ ಜಗದೀಶ ಮೊಗವೀರ ವಂದಿಸಿದರೆ, ಉದ್ಯಮಿ ರಾಘವೇಂದ್ರ ಶೆಟ್ಟಿ ಜಡ್ಕಲ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.

Related Articles

Back to top button
error: Content is protected !!