2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನಿಗೆ ಆಸ್ಪತ್ರೆಯಲ್ಲಿ ಪ್ರಿಯಕನೊಂದಿಗೆ ಸೇರಿ ಗ್ಲುಕೋಸ್ ಬಾಟಲ್ನಲ್ಲಿ ವಿಷ ಹಾಕಿ ಗಂಡನನ್ನು ಕೊಂದ ಪತ್ನಿ!
Views: 47
ಕನ್ನಡ ಕರಾವಳಿ ಸುದ್ದಿ:ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ರೂ.2 ಕೋಟಿ ವಿಮೆ ಹಣಕ್ಕಾಗಿ ಪ್ರಿಯಕರ ಜೊತೆ ಸೇರಿ ಮಾಜಿ ಸೈನಿಕ ಸಂದೀಪ್ ಮಾಂಜರಿ(45) ಅವರನ್ನು ಪತ್ನಿ ಸುಮಾ ಮಾಂಜರಿ ವಿಷ ನೀಡಿ ಕೊಲೆಗೈದ ಘಟನೆ ನಡೆದಿದೆ.
ಹುಕ್ಕೇರಿಯಲ್ಲಿನ ದೇವಿ ಜಾತ್ರೆ ಮುಗಿಸಿಕೊಂಡು ಸಂದೀಪ್ ಮಾಂಜರಿ-ಸುಮಾ ಮಾಂಜರಿ ದಂಪತಿ ವಾಪಸ್ ಬರುವಾಗ ರಸ್ತೆ ಅಪಘಾತ ಸಂಭವಿಸಿದೆ. ಸಂದೀಪ್ ಮಾಂಜರಿಗೆ ತೀವ್ರವಾದ ಪೆಟ್ಟಾಗಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸುವಂಥ ಪರಿಸ್ಥಿತಿ ಎದುರಾಯಿತು. ಅದರಂತೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು.
ಪುಂಡಲೀಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಸುಮಾಗೆ, ಪತಿ ಸಂದೀಪ್ ಮಾಂಜರಿಗೆ ಗತಿ ಕಾಣಿಸಲೇಬೇಕೆಂದು ಹೊಂಚುಹಾಕಿ ಕೂತಿದ್ದ ಅವಳು ಯಾವಾಗ, ರಸ್ತೆ ಅಪಘಾತ ಸಂಭವಿಸಿತೋ, ಇದೇ ಒಳ್ಳೆಯ ಸಮಯವೆಂದು ತಿಳಿದು, ಪ್ರಿಯಕರನ ಜೊತೆ ಸೇರಿ ಮಾಜಿ ಸೈನಿಕ, ಪತಿ ಸಂದೀಪ್ನ ಮುಗಿಸಲು ಸ್ಕೆಚ್ ಹಾಕಿದ್ದಳು ಐನಾತಿ ಸುಮಾ ಮಾಂಜರಿ. ಒಂದೆಡೆ ಮಗ್ಗುಲ ಮುಳ್ಳೆಂಬ ಪತಿ ತನ್ನ ಜೀವನದಿಂದ ಪರ್ಮನೆಂಟಾಗಿ ದೂರವಾಗುತ್ತಿರುವ ಖುಷಿ, ಇನ್ನೊಂದೆಡೆ, ಪತಿ ಪರಮೇಶ್ವರನ ವಿಮೆಯ 2 ಕೋಟಿ ರೂಪಾಯಿ ತನಗೇ ಬರುವುದೆಂಬ ಸಂತಸ. ಹಾಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದೀಪ್ಗೆ, ಗ್ಲುಕೋಸ್ ಬಾಟಲ್ನಲ್ಲಿ ವಿಷ ಹಾಕಿ ಕೊಲೆ ಮಾಡಿರಬಹುದು ಎಂಬ ಶಂಕೆ ಹುಟ್ಟದೇ ಇರದು. ಸಂದೀಪ್ ಪೋಷಕರ ಅನುಮಾನದ ಬೆರಳು ನೇರವಾಗಿ ಸುಮಾ ಕಡೆಗೆ ತೋರಿಸುತ್ತಿತ್ತು. ಆ ಸಂದರ್ಭದಲ್ಲಿ ಪೋಷಕರ ಆರೋಪ ಸರಿಯಾಗೇ ಇತ್ತು. ಸಾವಿನ ಬಳಿಕ ಪೋಷಕರಿಗೆ ಸಮಾಧಾನವೇ ಇರಲಿಲ್ಲ. ಅವರಿಗೆ ಸದಾ ಅನುಮಾನವೆಂಬ ಭೂತ ಕಾಡುತ್ತಲೇ ಇತ್ತು. ಅದನ್ನು ವ್ಯಕ್ತಪಡಿಸಲು ತಡವೂ ಮಾಡದೇ, ಯಮಕನಮರಡಿ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದರು. ಆವಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.






