ಸಿದ್ದಾಪುರ: ಐಬಿಕ್ಸ್ ಬೇಲಿ ವಿದ್ಯುತ್ ತಗಲಿ ಸಾವು ಪ್ರಕರಣ, ಪ್ರತಿ ದೂರು
Views: 62
ಕನ್ನಡ ಕರಾವಳಿ ಸುದ್ದಿ: ಐರಬೈಲು ಸಮೀಪದ ಕಿರ್ಲಾಡಿಯಲ್ಲಿ ಮನೆಯ ತೋಟಕ್ಕೆ ಅಳವಡಿಸಿದ ಐಬಿಕ್ಸ್ ಬೇಲಿಯ ವಿದ್ಯುತ್ ತಗಲಿ ತನ್ನ ತಂದೆ ಗಾಂಧಿ ಶೆಟ್ಟಿ ಎ.21ರಂದು ಮೃತಪಟ್ಟಿದ್ದು, ಈ ಘಟನೆಗೆ ಸಹೋದರಿ ಪ್ರೀತಿ ಶೆಟ್ಟಿ ಕಾರಣ ಎಂದು ಮೃತರ ಪುತ್ರ ಪ್ರವೀಣ್ ಕುಮಾರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆ ಗಾಂಧಿ ಶೆಟ್ಟಿ ಅವರು ಐಬಿಕ್ಸ್ ಬೇಲಿಯ ವಿದ್ಯುತ್ ತಗುಲಿ ಮೃತಪಟ್ಟಿದ್ದು, ಇದರ ಬಗ್ಗೆ ಸ್ಥಳೀಯರು ಸಂಪೂರ್ಣ ಸಾಕ್ಷಿ ಸಹಿತ ತನಗೆ ಮಾಹಿತಿ ನೀಡಿದ್ದಾರೆ ಎಂದು ಮೃತರ ಪುತ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮನೆಯಲ್ಲಿರುವ ಮೋಟಾರು ಶೆಡ್ಡಿನಲ್ಲಿ ವಿದ್ಯುತ್ ತಗಲಿ ತಂದೆ ಗಾಂಧಿ ಶೆಟ್ಟಿ ಮೃತಪಟ್ಟಿದ್ದಾರೆ ಎಂದು ಪ್ರೀತಿ ಶೆಟ್ಟಿ ಸುಳ್ಳು ಮಾಹಿತಿ ನೀಡಿ, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಎಲ್ಲ ಸಾಕ್ಷ್ಯವನ್ನು ನಾಶ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತಂದೆ ಸಾವಿನ ಬಗ್ಗೆ ತನಗೆ ಸಂಶಯ ಮೂಡಿದ್ದು, ಪುನಃ ತನಿಖೆ ಮಾಡುವಂತೆ ದೂರು ನೀಡಿದ್ದಾರೆ.






