ಮಾಲತಿ ಶೆಟ್ಟಿಗಾರ್ ವಕ್ವಾಡಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

Views: 462
ಕುಂದಾಪುರ: ಉಡುಪಿ ಜಿಲ್ಲಾ ಮಟ್ಟದ 2024-25 ನೇ ಸಾಲಿನ ಪ್ರೌಢಶಾಲಾ ವಿಭಾಗದಿಂದ ಉಡುಪಿ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಮಾಲತಿ ಶೆಟ್ಟಿಗಾರ್ ವಕ್ವಾಡಿ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕವಯಿತ್ರಿಯಾಗಿ, ವಿಮರ್ಶಕಿಯಾಗಿ, ಉತ್ತಮ ಬರಹಗಾರ್ತಿಯಾಗಿ, ಸಾಹಿತ್ಯದ ಸಾರಥಿಯಾಗಿ ಗುರುತಿಸಿಕೊಂಡಿರುವ ಇವರು ಶಾಲೆಯಲ್ಲಿ ಪಾಠ ಪ್ರವಚನದ ಜೊತೆಗೆ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧನೆಗೆ ನೆರವಾಗಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದು, ತಮ್ಮ ಅಪಾರ ವಿದ್ವತ್ತು ಮತ್ತು ನಡೆ-ನುಡಿಯಿಂದ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದವರೆಗೂ ಕೊಂಡೊಯ್ದಿದ್ದಾರೆ.
2002ರಲ್ಲಿ ಸಹ ಶಿಕ್ಷಕಿಯಾಗಿ ಕುಂದಾಪುರ ತಾಲೂಕಿನ ಹಾರ್ದಳ್ಳಿ -ಮಂಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, 2010ರಲ್ಲಿ ಸೇವಾ ಪದೋನ್ನತಿ ಪಡೆದು ಅಲ್ಬಾಡಿ-ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಗೆ ಕನ್ನಡ ಭಾಷಾ ಶಿಕ್ಷಕಿಯಾಗಿ ನೇಮಕಗೊಂಡರು.
2021 ರಲ್ಲಿ ಉಡುಪಿಯ ಮಲ್ಪೆ ಸರಕಾರಿ ಪದವಿಪೂರ್ವ ಕಾಲೇಜಿಗೆ ವರ್ಗಾವಣೆಗೊಂಡು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಂದಾಪುರ ತಾಲೂಕಿನ ವಕ್ವಾಡಿ ಶೀನ ಶೆಟ್ಟಿಗಾರ್ ಮತ್ತು ವಸಂತಿ ದಂಪತಿಯ ಪುತ್ರಿಯಾಗಿ, ಪ್ರಾಥಮಿಕ ಶಿಕ್ಷಣವನ್ನು ವಕ್ವಾಡಿಯಲ್ಲಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ತೆಕ್ಕಟ್ಟೆಯಲ್ಲಿ ಪೂರೈಸಿ, ಟಿಸಿಎಚ್ ಪದವಿಯನ್ನು ಉಡುಪಿಯಲ್ಲಿ, ಬಿ.ಎ. ಎಂ.ಎ ಮತ್ತು ಎಂ.ಎಡ್ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಮತ್ತು ಮೈಸೂರಿನಲ್ಲಿ ಪಡೆದಿದ್ದಾರೆ. ಎಂ.ಎಡ್, ಪದವಿಯನ್ನು ಮೈಸೂರು ಮುಕ್ತ ವಿವಿಯಲ್ಲಿ ರಾಜ್ಯಮಟ್ಟದ 9ನೇ ರಾಂಕ್ ಪಡೆದಿರುತ್ತಾರೆ.







