ಮಂಗಳಮುಖಿ ಜತೆ ಪ್ರೀತಿಯಲ್ಲಿದ್ದ ಆಟೋ ಚಾಲಕ; ನೇಣು ಬೀಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆ
Views: 72
ಕನ್ನಡ ಕರಾವಳಿ ಸುದ್ದಿ: ಕಳೆದ 6 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪ್ರೇಮಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬಳ್ಳಾರಿ ನಗರದ ಕೆಎಂಎಫ್ ಡೈರಿ ಕ್ರಾಸ್ ಬಳಿ ನಡೆದಿದೆ.
ಮಂಗಳಮುಖಿ ಸುಹಾಸಿನಿ ಹಾಗೂ ಯುವಕ ಶೇಖರ್ ಅಲಿಯಾಸ್ ಮಣಿ ಮೃತರು. ನೇಣು ಬೀಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ಶೇಖರ್ ಅಲಿಯಾಸ್ ಮಣಿ (31) ಹಾಗೂ ಬಳ್ಳಾರಿ ತಾಲೂಕಿನ ಚಾಗನೂರ ಗ್ರಾಮದ ಮಂಗಳಮುಖಿ ಸುಹಾಸಿನಿ (29) ಹಲವು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದರು. ಮಣಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಸುಹಾಸಿನಿ ಮಂಗಳಮುಖಿ ಎಂದು ತಿಳಿದರೂ ಆಕೆಯನ್ನು ಶೇಖರ್ ಪ್ರೀತಿಸುತ್ತಿದ್ದ. ಇಬ್ಬರೂ ಕಳೆದ 6 ವರ್ಷಗಳಿಂದ ಬಾಡಿಗೆ ಮನೆಯಲ್ಲಿವಾಸವಾಗಿದ್ದರು. ಆದರೆ, ಇಬ್ಬರೂ ಇದೀಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸುಹಾಸಿನಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಹಣಕ್ಕಾಗಿ ಜತೆಗಿದ್ದ ಮಣಿಯೇ ಸುಹಾಸಿನಿಯನ್ನು ಕೊಂದಿದ್ದಾನೆ ಎಂದು ಆಕೆಯ ಪೋಷಕರು ಆರೋಪ ಮಾಡುತ್ತಿದ್ದಾರೆ.ಇನ್ನು ಪ್ರೀತಿ-ಪ್ರೇಮ ಅಂತ ಹಿಂದೆ ಬಿದ್ದು ಸುಹಾಸಿನಿಯನ್ನು ಕೊಲೆ ಮಾಡಿ ಶೇಖರ್ ಆತ್ಮಹತ್ಯೆ ಹಾಕಿಕೊಂಡಿದ್ದಾನೆ ಎಂದು ಕೆಲ ಮಂಗಳಮುಖಿಯರು ಕೂಡ ಆರೋಪ ಮಾಡಿದ್ದಾರೆ. ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






