ಬ್ರಹ್ಮಾವರ: ಮಂದಾರ್ತಿಯ ಮೈರ್ಕೊಮೆಯಲ್ಲಿ ರಿಕ್ಷಾಗೆ ನಾಯಿ ಅಡ್ಡ ಬಂದು ಚಾಲಕ ಸಾವು
Views: 28
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಸಮೀಪದ ಮೈರ್ಕೊಮೆ ಹಾಲು ಡೈರಿ ಸಮೀಪ ರಿಕ್ಷಾಗೆ ನಾಯಿಯೊಂದು ಅಡ್ಡ ಬಂದು ರಿಕ್ಷಾ ಪಲ್ಟಿಯಾಗಿ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತ ರಿಕ್ಷಾ ಚಾಲಕರನ್ನ ಬೆಳ್ತಾಡಿಯ ನರಸಿಂಹ ಪೂಜಾರಿ ಎಂದು ತಿಳಿದುಬಂದಿದೆ. ನರಸಿಂಹ ಪೂಜಾರಿಯವರು ಶಿರೂರು ಮೂರು ಕೈ ಕಡೆಯಿಂದ ಕೊಕ್ಕರ್ಣೆ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಬರುತ್ತಿದ್ದಾಗ ಹೆಗ್ಗುಂಜೆ ಗ್ರಾಮದ ಮೈರ್ಕೊಮೆ ಹಾಲು ಡೈರಿ ಎದುರು ಬರುತ್ತಿದ್ದಂತೆ ನಾಯಿ ಆಟೋ ರಿಕ್ಷಾಕ್ಕೆ ಅಡ್ಡ ಬಂದಿದ್ದು, ಆಗ ನರಸಿಂಹ ಪೂಜಾರಿ ರವರು ರಿಕ್ಷಾವನ್ನು ಒಮ್ಮೆಲೆ ಎಡಕ್ಕೆ ಚಲಾಯಿಸಿದ್ದರಿಂದ, ರಿಕ್ಷಾದ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಪರಿಣಾಮ ನರಸಿಂಹ ಪೂಜಾರಿಯವರಿಗೆ ತೀವ್ರ ಗಾಯವಾಗಿದ್ದು ಕೂಡಲೆ ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






