ಪದೇ ಪದೇ ಓಡಿ ಹೋಗುತ್ತಿದ್ದ 8 ವರ್ಷದ ಬಾಲಕನನ್ನು ಸರಪಳಿಯಲ್ಲಿ ಕಟ್ಟಿ ಹಾಕಿದ ಹಾಸ್ಟೆಲ್ ಸಿಬ್ಬಂದಿ, ತನಿಖೆಗೆ ಆದೇಶ
Views: 80
ಕನ್ನಡ ಕರಾವಳಿ ಸುದ್ದಿ: ಪದೇ ಪದೇ ಮನೆಗೆ ಓಡಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಹಾಸ್ಟೆಲ್ ನಲ್ಲಿ ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 4ನೇ ತರಗತಿಯ ವಿದ್ಯಾರ್ಥಿಯನ್ನು ಹಾಸ್ಟೆಲ್ನಲ್ಲಿ ಮಂಚಕ್ಕೆ ಸರಪಳಿಯಿಂದ ಕಟ್ಟಿ ಹಾಕಲಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕುರಿತು ಮಾಹಿತಿ ತಿಳಿದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಸರ್ಕಾರಿ ಹಾಸ್ಟೆಲ್ನಲ್ಲಿ 4ನೇ ತರಗತಿಯ ವಿದ್ಯಾರ್ಥಿಯನ್ನು ಹಾಸಿಗೆಗೆ ಸರಪಳಿಯಿಂದ ಕಟ್ಟಿ ಹಾಕಲಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ತನಿಖೆಗೆ ಅಧಿಕಾರಿಗಳು ಆದೇಶಿಸಿದ್ದಾರೆ.
ಹಾಸ್ಟೆಲ್ ನಲ್ಲಿ ಸಿಬ್ಬಂದಿಯ ಅನುಮತಿ ಪಡೆಯದೆ ಬಾಲಕ ಹಾಸ್ಟೆಲ್ನಿಂದ ಮನೆಗೆ ಪದೇ ಪದೇ ಓಡಿಹೋಗುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಸರಪಳಿಯಿಂದ ಬಂಧಿಸಲಾಗಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಶಿಕ್ಷಕರೊಬ್ಬರು ಹಾಸ್ಟೆಲ್ಗೆ ಭೇಟಿ ನೀಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅವರು ಇದರ ವಿಡಿಯೊವನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೀಲಗಿರಿ ಬ್ಲಾಕ್ನಲ್ಲಿ 8 ವರ್ಷದ ಬಾಲಕನನ್ನು ಕಬ್ಬಿಣದ ಸಂಕೋಲೆಯಿಂದ ಹಾಸಿಗೆಗೆ ಕಾಲಿನಿಂದ ಕಟ್ಟಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲಸೋರ್ನ ಬೆಗುನಿಯಾದಲ್ಲಿರುವ ಸರ್ಕಾರಿ ಯುಪಿ ಶಾಲೆಯ ಬಾಲಕ ಹೇಳದೆ ಮನೆಗೆ ಓಡಿ ಹೋಗಿರುವುದಕ್ಕೆ ಶಿಕ್ಷೆಯಾಗಿ ಸುಮಾರು 10 ದಿನಗಳ ಕಾಲ ಸರಪಳಿಯಲ್ಲಿ ಬಂಧಿಸಲಾಗಿತ್ತು ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಮುಖ್ಯೋಪಾಧ್ಯಾಯ ರಘುನಾಥ್ ಬುಗುಡೈ, ಬಾಲಕ ಓಡಿಹೋಗದಂತೆ ತಡೆಯಲು ಒಂದು ದಿನವಷ್ಟೇ ಆತನನ್ನು ಸರಪಳಿಯಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಅವನ ಪೋಷಕರಿಗೆ ತಿಳಿದಿದೆ. ಅವನು ಪದೇಪದೇ ಮನೆಗೆ ಓಡಿ ಬರುತ್ತಿರುವುದಕ್ಕೆ ಅವನ ತಂದೆಯೇ ಹಾಸ್ಟೆಲ್ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.






