ಇತರೆ
ಚಾರಣಕ್ಕೆ ಹೋದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು…ಅಪಹರಣದ ಶಂಕೆ?
Views: 184
ಕನ್ನಡ ಕರಾವಳಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಣಿಕ್ಯಧಾರಾ ಜಲಪಾತದ ಬಳಿ ಕಾಣೆಯಾಗಿರುವ ಕೇರಳ ಮೂಲದ 15 ವರ್ಷದ ವಿದ್ಯಾರ್ಥಿನಿ ಶ್ರೀನಂದಾ ಎಂಬಾಕೆಯ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಆಕೆ ನಾಪತ್ತೆಯಾಗಿ ಮೂರು ದಿನಗಳಾದರೂ ಆಕೆಯ ಸುಳಿವು ಸಿಕ್ಕಿಲ್ಲವಾದ್ದರಿಂದ ಆಕೆ ಅಪಹರಣಕ್ಕೀಡಾಗಿರಬಹುದು ಎಂದು ಆಕೆಯ ತಾಯಿ ಸಂಶಯ ವ್ಯಕ್ತಪಡಿಸಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದಾ, ತನ್ನ ಕುಟುಂಬ ಸದಸ್ಯರೊಂದಿಗೆ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಸೋಮವಾರ ಪ್ರವಾಸಕ್ಕೆ ಬಂದಿದ್ದಳು. ಸುಮಾರು 40 ಮಂದಿಯಿದ್ದ ತನ್ನ ಬಂಧುಗಳ ಗುಂಪಿನೊಂದಿಗೆ ಪ್ರವಾಸದಲ್ಲಿದ್ದಾಗ, ಮಣಿಕ್ಯಧಾರಾ ಜಲಪಾತದ ಬಳಿ ಫೋಟೋ ತೆಗೆಯುವ ಸಂದರ್ಭದಲ್ಲಿ ಸಂಜೆ ಸುಮಾರು 5.30ರ ಹೊತ್ತಿಗೆ ಬಾಲಕಿ ಕೊನೆಯದಾಗಿ ಕಾಣಿಸಿಕೊಂಡಿದ್ದಾಳೆ. ಜಲಪಾತದ ಮೇಲ್ಬಾಗಕ್ಕೆ ಹತ್ತಿ ಫೋಟೋ ತೆಗೆದುಕೊಂಡು ಮರಳುವ ವೇಳೆ ಬಾಲಕಿ ಕಾಣೆಯಾಗಿದ್ದಾಳೆ ಎಂದು ಹೇಳಲಾಗಿದೆ.






