ಶಿಕ್ಷಣ

ಖೇಲೋ ಜನತಾ ವಾರ್ಷಿಕ ಕ್ರೀಡೋತ್ಸವ ವಿಜೃಂಭಣೆಯಿಂದ ಸಂಪನ್ನ

Views: 18

ಕನ್ನಡ ಕರಾವಳಿ ಸುದ್ದಿ: ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಾರ್ಷಿಕ ಕ್ರೀಡಾಕೂಟವು ಜನತಾ ಪ.ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನೆರವೇರಿತು.

ಪಿಎಂ ಶ್ರೀ ಸ್ಕೂಲ್ ಚಿತ್ತೂರಿನ ದೈಹಿಕ ಶಿಕ್ಷಕರಾಗಿರುವ ರಾಘವೇಂದ್ರ ಶೆಟ್ಟಿ ಅವರು ಧ್ವಜಾರೋಹಣವನ್ನು ಮಾಡಿ, ಕಲಿಕೆಯ ಜೊತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಲು ಕ್ರೀಡಾಕೂಟದಿಂದ ಸಾಧ್ಯವಾಗಿದೆ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿರುವ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಅರೆಶಿರೂರು ಇದರ ದೈಹಿಕ ಶಿಕ್ಷಕರಾಗಿರುವ ರಾಜು ಶೆಟ್ಟಿಯವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ, ಸಹನಶೀಲತೆ ಮತ್ತು ಸದೃಢ ಮನಸ್ಸಿದ್ದಾಗ ಮಾತ್ರ ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಲು ಸಾಧ್ಯ. ಪಠ್ಯ ಮತ್ತು ಪಠ್ಯೇತರ ವಿಷಯಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕರಾಗಿರುವ ಜಗದೀಶ್ ಶೆಟ್ಟಿ ಅವರು ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕ್ರೀಡೆ ,ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಜನತಾ ಪ.ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾಗಿರುವ ಉದಯ ನಾಯ್ಕ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು. ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗಬೇಕು. ಮಕ್ಕಳಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತದೆ ಎಂದು ಶುಭ ಹಾರೈಸಿದರು.

ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಗಣೇಶ ಮೊಗವೀರರು ಅಂಧಕಾರವನ್ನು ಹೊಡೆದೋಡಿಸುವ ದೀಪವನ್ನು ಬೆಳಗುವುದರ ಮೂಲಕ,ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಲು ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗ ಕ್ರೀಡೆಯಲ್ಲಿ ಯಶಸ್ವಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಶಿಕ್ಷಕ/ ಶಿಕ್ಷಕರೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಕನ್ನಡ ಸಹಶಿಕ್ಷಕಿಯಾಗಿರುವ ಅನಿತಾ ಅವರು ವಂದಿಸಿ, ಮುಖ್ಯ ಶಿಕ್ಷಕಿಯಾಗಿರುವ ದೀಪಿಕಾ ಆಚಾರ್ಯ ಸ್ವಾಗತಿಸಿ, ಸಂಯೋಜಕರಾಗಿರುವ ಸುಬ್ರಮಣ್ಯ ಮರಾಟಿಯವರು ನಿರೂಪಿಸಿದರು.

Related Articles

Back to top button
error: Content is protected !!