ಇತರೆ

ಕುಂದೇಶ್ವರ ದೀಪೋತ್ಸವ ನಿರ್ಲಕ್ಷ ಮಾಡಿದ ಪುರಸಭೆ ವಿರುದ್ಧ ವಿಕಾಸ್ ಹೆಗ್ಡೆ ಆಕ್ರೋಶ

Views: 210

ಕನ್ನಡ ಕರಾವಳಿ ಸುದ್ದಿ : ಕುಂದೇಶ್ವರ ದೀಪೋತ್ಸವಕ್ಕೆ ದೀಪಾಲಂಕಾರ ಮಾಡದ ಕುಂದಾಪುರ ಪುರಸಭೆಯದ್ದು ಅತ್ಯಂತ ಹೊಣೆಗೇಡಿತನವಾಗಿದೆ ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ಪುರದ ಅತ್ಯಂತ ದೊಡ್ಡ ಹಾಗೂ ಅತೀ ಹೆಚ್ಚು ಭಕ್ತಾದಿಗಳು ಭಕ್ತಿಯಿಂದ ಸೇರುವ ಹಬ್ಬ ಕುಂದೇಶ್ವರ ದೀಪೋತ್ಸವ. ಈ ಹಿಂದೆ ಪ್ರತಿ ವರ್ಷ ಕುಂದಾಪುರ ಪುರಸಭೆ ವತಿಯಿಂದ ಕುಂದಾಪುರದ ನಗರ ಭಾಗವಾದ ಕುಂದಾಪುರ ಶಾಸ್ತ್ರೀ ವೃತ್ತ ಹಾಗೂ ಶಾಸ್ತ್ರೀ ವೃತ್ತ ಬಸ್ ನಿಲ್ದಾಣದಿಂದ ಪಾರಿಜಾತ ವೃತ್ತದ ತನಕ ಸಂಪೂರ್ಣ ದೀಪಾಲಂಕಾರ ಮಾಡಲಾಗುತ್ತಿತ್ತು ಹಾಗೂ ಶಾಸ್ತ್ರೀ ವೃತ್ತದ ಬಳಿ ದೊಡ್ಡ ಪರದೆಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಒಂದಷ್ಟು ಮಾಹಿತಿ, ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ಈ ಭಾರೀ ಅದು ಯಾವುದನ್ನೂ ಮಾಡದೆ ಕುಂದಾಪುರ ಪುರಸಭೆ ಕುಂದೇಶ್ವರ ದೀಪೋತ್ಸವವನ್ನು ನಿರ್ಲಕ್ಷ ಮಾಡಿದೆ.

ಇದು ಹಬ್ಬವನ್ನು ಸಂತೋಷ ಹಾಗೂ ಸಂಭ್ರಮದಿಂದ ಆಚರಣೆ ಮಾಡುವ ಕುಂದಾಪುರದ ಜನತೆಗೆ ಅತ್ಯಂತ ಬೇಸರ ಸಂಗತಿಯಾಗಿದೆ. ಆದರೆ ಕುಂದಾಪುರ ಪುರಸಭೆಯವರು ದೀಪೋತ್ಸವಕ್ಕೆ ಬರುವ ಬೀದಿ ಬದಿ ವ್ಯಾಪಾರಸ್ಥರಿಂದ ಸ್ಥಳ ಬಾಡಿಗೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹ ಮಾಡುತ್ತಿದ್ದು ಈ ಹಣದ ಲೆಕ್ಕಪತ್ರದ ಬಗ್ಗೆ ಕೂಡ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿವೆ. ಕುಂದಾಪುರ ಪುರಸಭೆ ಆಡಳಿತಧಿಕಾರಿಗಳಾದ ಕುಂದಾಪುರ ಉಪವಿಭಾಗಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಇಂದು ಸಂಜೆಯ ಒಳಗಾಗಿ ಕುಂದಾಪುರ ಮುಖ್ಯ ರಸ್ತೆಯಲ್ಲಿ ಹಿಂದಿನಂತೆ ದೀಪಾಲಂಕಾರ ಮಾಡಲು ಕ್ರಮಕೈಗೊಳ್ಳಬೇಕಾಗಿ ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Back to top button
error: Content is protected !!