ಕುಂದಾಪುರ: ಯಕ್ಷಗಾನ ವೀಕ್ಷಿಸಲು ತೆರಳಿದ್ದ ವ್ಯಕ್ತಿಗೆ ಸ್ಕೂಟರ್ ಡಿಕ್ಕಿಯಾಗಿ ಸಾವು
Views: 150
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಂದಾವರ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಅವರು ಏಪ್ರಿಲ್ 8ರಂದು ರಾತ್ರಿ ಯಕ್ಷಗಾನ ವೀಕ್ಷಿಸಲು ಮನೆಯಿಂದ ಮೆರ್ಡಿ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಂದಾವರ ಗ್ರಾಮ ಪಂಚಾಯತ್ ಕಚೇರಿಯ ಎದುರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬಸ್ರೂರು ಮೂರ್ಕೈ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರ ಗೋಪಾಲ ಶೆಟ್ಟಿ ಅವರು ಪತ್ನಿ ಯಶೋಧರನ್ನು ಸಹಸವಾರಿಯಾಗಿ ಕೂರಿಸಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ, ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿ ಹೊಡೆದ ಪರಿಣಾಮ ಹೆನ್ರಿ ಡಿ ಸೋಜ ಅವರ ತಲೆಗೆ ಗಂಭೀರ ರಕ್ತಗಾಯವಾಗಿದ್ದು, ಸ್ಕೂಟರ್ ಸವಾರ ಹಾಗೂ ಸಹಸವಾರಿಣಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಗಾಯಾಳುವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.






