ಎಂಆರ್ಐ ಸ್ಕ್ಯಾನ್ ಮಾಡುವಾಗ 6 ವರ್ಷದ ಬಾಲಕ ಸಾವು: ಸಿಬ್ಬಂದಿಯ ನಿರ್ಲಕ್ಷ್ಯ ಪಾಲಕರ ಆರೋಪ
Views: 18
ಕನ್ನಡ ಕರಾವಳಿ ಸುದ್ದಿ: ಎಂಆರ್ಐ ಸ್ಕ್ಯಾನ್ ಮಾಡುವಾಗ 6 ವರ್ಷದ ಬಾಲಕ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ನಡೆದಿದೆ.
ಆರೋಗ್ಯವಂತನಾಗಿಯೇ ಇದ್ದ ಬಾಲಕ ಡಯಾಗ್ನೋಸ್ಟಿಕ್ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮೃತಟಪಟ್ಟಿರುವುದಾಗಿ ಪಾಲಕರು ಆರೋಪಿಸಿದ್ದಾರೆ. ಅವಧಿ ಮೀರಿದ ಔಷಧವನ್ನು ಓವರ್ ಡೋಸ್ ನೀಡಿದ್ದೇ ಅವಘಡಕ್ಕೆ ಕಾರಣ ಎನ್ನುವ ದೂರು ಕೇಳಿ ಬಂದಿದ್ದು, ಅಧಿಕಾರಿಗಳು ಡಯಾಗ್ನೋಸ್ಟಿಕ್ ಸೆಂಟರ್ಗೆ ಬೀಗ ಜಡಿದಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.
ʼʼಘಟನೆ ಬಗ್ಗೆ ತನಿಖೆ ನಡೆಸಲು 4 ಮಂದಿ ಸದಸ್ಯರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆʼʼ ಎಂದು ಗೌತಮ್ ಬುದ್ಧ ನಗರದ ಆರೋಗ್ಯಾಧಿಕಾರಿ ಡಾ. ಚಂದನ್ ಸೋನಿ ತಿಳಿಸಿದ್ದಾರೆ. ʼʼಬಾಲಕನ ಸಾವಿಗೆ ನಿಜವಾದ ಕಾರಣವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲವೂ ಗೊತ್ತಾಗಲಿದೆʼʼ ಎಂದು ಹೇಳಿದ್ದಾರೆ.
ಡುಂಗರಪುರ ಗ್ರಾಮದ ಬಾಲಕನನ್ನು ಗುರುವಾರ (ಫೆಬ್ರವರಿ 12) ಪೈ-3 ಪ್ರದೇಶದಲ್ಲಿನ ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ಎಂಐಆರ್ ಸ್ಕ್ಯಾನ್ಗಾಗಿ ಕರೆತರಲಾಯಿತು. ಅದುವರೆಗೆ ಆರೋಗ್ಯದಿಂದಿದ್ದ ಬಾಲಕ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾನೆ ಎನ್ನುವುದು ಕುಟುಂಬಸ್ಥರ ಆರೋಪ. ಇದಕ್ಕೆ ಮಿತಿ ಮೀರದ ಔಷಧಗಳ ಬಳಕೆಯೇ ಕಾರಣ ಎಂದಿದ್ದಾರೆ. “ಆಕ್ಷೇಪಣೆಗಳ ಹೊರತಾಗಿಯೂ, ಮತ್ತೊಂದು ಡೋಸ್ ಔಷಧವನ್ನು ನೀಡಲಾಯಿತು. ಬಾಲಕನ ಸ್ಥಿತಿ ಹದಗೆಡುತ್ತಿದ್ದಾಗಲೂ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸಿಲ್ಲ. ಎರಡನೇ ಡೋಸ್ ನಂತರ ಸುಮಾರು ಅರ್ಧ ಗಂಟೆಗಳ ಕಾಲ ಆತನನ್ನು ವಾರ್ಡ್ ಒಳಗೆ ಇರಿಸಲಾಯಿತುʼʼ ಎಂದು ದೂರಿನಲ್ಲಿ ಹೇಳಲಾಗಿದೆ.
ಸದ್ಯ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜನರ ಜೀವದೊಂದಿಗೆ ಚೆಲ್ಲಾಟವಾಡುವ ಇಂತಹ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






