ಅದಮಾರು ಪಿಪಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಮಂಜುನಾಥ ಎ.ವಿ. ಅಧಿಕಾರ ಸ್ವೀಕಾರ

Views: 56
ಪಡುಬಿದ್ರಿ: ಖ್ಯಾತ ವಿದ್ಯಾ ಸಂಸ್ಥೆ ಅದಮಾರು ಪೂರ್ಣಪ್ರಜ್ಞ ಪ್ರೌಡ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾಗಿ ಮಂಜುನಾಥ ಎ.ವಿ ಯವರು ಇಂದು ಅದಮಾರು ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ಖ್ಯಾತ ಶಿಕ್ಷಣ ತಜ್ಞರೂ, 34 ವರ್ಷಗಳ ಶೈಕ್ಷಣಿಕ ಅನುಭವವುಳ್ಳ ಹಾಗೂ ಡಾ.ಟಿ.ಎಂ.ಪೈ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ14 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುವ ಹಾಗೂ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜನಾಧಿಕಾರಿಯೂ ಆಗಿರುವ ಮಂಜುನಾಥ ಎ.ವಿ ಯವರು ಇದೀಗ ಅದಮಾರು ಪೂರ್ಣಪ್ರಜ್ಞ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂಧರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಉಡುಪಿ ವಿಭಾಗದ ಆಡಳಿತಾಧಿಕಾರಿ ಡಾ. ಎ.ಪಿ ಭಟ್ರವರು ಶಾಲು ಹೊದಿಸಿ ಮಂಜುನಾಥ್ರವರಿಗೆ ಶುಭಹಾರೈಸಿ ಸ್ವಾಗತಿಸಲಾಯಿತು.
ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಧರ್ ಕೆ. ರಾವ್ ರವರು ನೂತನವಾಗಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸಿದ ಮಂಜುನಾಥರಿಗೆ ಮೈಸೂರು ಪೇಟಾ ತೊಡಿಸಿ, ಉತ್ತಮ ಶೈಕ್ಷಣಿಕ ಅನುಭವ ಹೊಂದಿರುವ ಮಂಜುನಾಥರವರು ಪೂರ್ಣಪ್ರಜ್ಞ ಆಂಗ್ಲಮಾಧ್ಯಮ ಪ್ರೌಢಶಾಲೆಯನ್ನು ಅತ್ಯುತ್ತಮ ಸಂಸ್ಥೆಯನ್ನಾಗಿ ರೂಪಿಸುತ್ತಾರೆ ಎಂಬ ಭರವಸೆ ನನಗಿದೆ ಎಂದರು.
ಗೌರವ ಕೋಶಾಧಿಕಾರಿ ಸಿ.ಎ ಗಣೇಶ್ ಹೆಬ್ಬಾರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಭವವುಳ್ಳ ಮಂಜುನಾಥ್ ರವರು ಸಂಸ್ಥೆಯನ್ನು ಬಾನೆತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.
ಅಧಿಕಾರ ಸ್ವೀಕರಿಸಿದ ಮಂಜುನಾಥ ಎ.ವಿ ಯವರು ಮಾತನಾಡಿ, ಪೂರ್ಣಪ್ರಜ್ಞ ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ನಾನು ವಿಭುದೇಶ ತೀರ್ಥ ಶ್ರೀಪಾದರ ಅನುಗ್ರಹದಿಂದ ಬೆಳೆದವನು. ಈ ಸಂಸ್ಥೆಗೆ ಸೇವೆ ಸಲ್ಲಿಸುವ ಸದಾವಕಾಶ ದೊರಕಿದೆ. ಇದನ್ನು ಕಲ್ಪಿಸಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ. ಸಂಸ್ಥೆಯ ಶ್ರೇಯೋಭಿವೃದ್ದಿಗೆ ಕೈಮೀರಿ ಪ್ರಯತ್ನಿಸುತ್ತೇನೆ ಎಂದರು.
ನಿರ್ಗಮಿತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮೀ ಆರ್ ನಾಯಕ್ ಮಾತನಾಡಿ, ತನಗೆ ಮುಖ್ಯೋಪಾಧ್ಯಾಯಿನಿ ಆಗಿ ಕಾರ್ಯನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಶ್ರೀಮತಿ ನಿಶ್ಮಿತಾ ಶೆಟ್ಟಿ ಸ್ವಾಗತಿಸಿದರು. ಆಡಳಿತ ಮಂಡಳಿ ಪ್ರತಿನಿಧಿ ಪ್ರೊ. ನಿತ್ಯಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಲಕ್ಷ್ಮೀ ಆರ್ ನಾಯಕ್ ವಂದಿಸಿದರು.






