ಅಣ್ಣಾಮಲೈ ಮೋದಿ ಸಂಪುಟದಲ್ಲಿ ಸ್ಥಾನ ಚಾನ್ಸ್ ಮಿಸ್? ಅಭಿಮಾನಿಗಳಿಗೆ ಶಾಕ್!

Views: 200
ನವದೆಹಲಿ: ಕೆಲವೇ ಕ್ಷಣದಲ್ಲಿ ರಾಷ್ಟ್ರಪತಿ ಭವನದಲ್ಲಿ ನೂತನ NDA ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿಯಿಂದ 53, ಮಿತ್ರಪಕ್ಷಗಳಿಂದ 12 ಮಂದಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ರಾಷ್ಟ್ರಪತಿ ಭವನದಲ್ಲಿ ಒಟ್ಟು 65 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ದೆಹಲಿಯಿಂದ ಬಂದ ಮಾಹಿತಿ ಪ್ರಕಾರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಕೂಡ ಮೋದಿ ಕ್ಯಾಬಿನೆಟ್ ಸೇರುತ್ತಾರೆ ಎನ್ನಲಾಗಿತ್ತು. ಆದರೆ ಅಣ್ಣಾಮಲೈ ಅವರನ್ನು ಸದ್ಯಕ್ಕೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನುಮಾನವಾಗಿದೆ.
ಕೊಯಮತ್ತೂರು ಲೋಕಸಭಾ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ ಅವರು ಸೋಲು ಕಂಡಿದ್ದರು. ಅಣ್ಣಾಮಲೈ ಸೋತಿದ್ದರೂ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಖಾತೆ ತೆರೆಯಲು ಮತ್ತು ಹಿಂದುತ್ವದ ಬೇರು ಭದ್ರಪಡಿಸಲು ಕೇಂದ್ರ ಸಚಿವ ಸ್ಥಾನ ನೀಡಬೇಕು ಅನ್ನೋ ಚರ್ಚೆಯಾಗಿತ್ತು. ಆದರೆ, ಅಣ್ಣಾಮಲೈ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ.
ಇಂದು ಬೆಳಗ್ಗೆ ಕೇಂದ್ರ ಸಚಿವರಾಗುವ ನಾಯಕರನ್ನು ಪ್ರಧಾನಿ ನಿವಾಸದ ಚಹಾಕೂಟಕ್ಕೆ ಆಹ್ವಾನಿಸಲಾಗಿತ್ತು. ಅಣ್ಣಾಮಲೈ ಅವರು ಈ ಚಹಾಕೂಟದ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದೆ.






