Views: 28
ಕನ್ನಡ ಕರಾವಳಿ ಸುದ್ದಿ: ಉಡುಪಿ ರಾಜಾಂಗಣದಲ್ಲಿ ಜರುಗಲಿರುವ ಉಡುಪಿ ಜಿಲ್ಲಾ ಹದಿನೇಳನೇ ಸಾಹಿತ್ಯ ಸಮ್ಮೇಳನದ ಸಂಘ ಸಂಸ್ಥೆ ವಿಭಾಗದ ಗೌರವಕ್ಕೆ ಜಿಲ್ಲೆಯ ಅಗ್ರಮಾನ್ಯ ಪೋರ್ಟೆಲ್ `ಕುಂದಾಪ್ರ ಡಾಟ್ ಕಾಂ’ ಪಾತ್ರವಾಗಿದೆ.
ಕುಂದಾಪುರ ತಾಲೂಕಿನ ಮೊದಲ ಪೂರ್ಣಪ್ರಮಾಣದ ಪೋರ್ಟೆಲ್ ಆಗಿ 2002ರಲ್ಲಿ ಆರಂಭಗೊಂಡ ಕುಂದಾಪ್ರ ಡಾಟ್ ಕಾಂ ಕಳೆದ ಹದಿಮೂರು ವರ್ಷಗಳಿಂದ ಸ್ಥಳೀಯ ಸುದ್ದಿ-ಮಾಹಿತಿ, ವಿಚಾರ ವೈಶಿಷ್ಟತೆಗಳನ್ನು ನಿರಂತರವಾಗಿ ಪ್ರಕಟಿಸುತ್ತಾ, ಕುಂದಾಪುರ – ಬೈಂದೂರು ತಾಲೂಕು ಹಾಗೂ ಜಿಲ್ಲೆಯಲ್ಲಿ ವಿವಿಧ ವಿಚಾರ ವಿಶಿಷ್ಟತೆಗಳನ್ನು ಪ್ರಕಟಿಸುವ ಮೂಲಕ ಗಮನ ಸೆಳೆದಿದೆ. ಗ್ರಾಮೀಣ ಭಾಗದ ಸಮಸ್ಯೆಗಳು, ಪ್ರಾದೇಶಿಕ ವೈಶಿಷ್ಟ್ಯಗಳನ್ನು ನಿರಂತವಾಗಿ ಪಸರಿಸುವ ಜೊತೆಗೆ ಕುಂದಾಪ್ರ ಕನ್ನಡ ಲೇಖನ ಬರಹಗಳು, ಅಂಕಣ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಜನಮಾಸನದಲ್ಲಿ ನೆಲೆಗೊಂಡಿದೆ.
ಈ ನಿರಂತರ ಸೇವೆಯನ್ನು ಗುರುತಿಸಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮೇ.01ರಂದು ನಡೆಯುವ ಉಡುಪಿ ಜಿಲ್ಲಾ ಹದಿನೇಳನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ‘ಕುಂದಾಪ್ರ ಡಾಟ್ ಕಾಂ’ ಸಂಸ್ಥೆಯನ್ನು ಗೌರವಿಸಲಾಗುತ್ತದೆ. ಸಂಸ್ಥೆಯ ಪರವಾಗಿ ಸಂಪಾದಕ ಸುನಿಲ್ ಬೈಂದೂರು ಅವರು ಸನ್ಮಾನವನ್ನು ಸ್ವೀಕರಿಸಲಿದ್ದಾರೆ.