ಜನಮನ

ಮದುವೆಯಾಗಿ ಐದೇ ದಿನಕ್ಕೆ ಹನಿಮೂನ್‌ನಲ್ಲಿದ್ದ ನೌಕಾಪಡೆ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ

Views: 200

ಕನ್ನಡ ಕರಾವಳಿ ಸುದ್ದಿ: ಕಾಶ್ಮೀರದ ಪಹಲ್‌ಗಾಮ್‌ ಕಣಿವೆಯಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ, ಹರಿಯಾಣದ ಕರ್ನಾಲ್‌ನ 26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರನ್ನು ಉಗ್ರರು ಗುಂಡಿಕ್ಕಿ ಸಾಯಿಸಿದ್ದಾರೆ. ನರ್ವಾಲ್ ವಿವಾಹವಾಗಿ ಕೇವಲ ಐದೇ ದಿನಗಳಾಗಿದ್ದವು. ಅವರು ಅಲ್ಪಕಾಲದ ರಜೆ ಪಡೆದು ದಂಪತಿ ಹನಿಮೂನ್‌ನಲ್ಲಿದ್ದರು.

ವಿನಯ್‌ ಅವರಿಗೆ ಏಪ್ರಿಲ್ 16ರಂದು ವಿವಾಹ ನಡೆದಿತ್ತು. ವಿವಾಹ ಆರತಕ್ಷತೆ ಏಪ್ರಿಲ್ 19ರಂದು ನಡೆದಿತ್ತು. ನಂತರ ಅಲ್ಪ ರಜೆ ಪಡೆದು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ನರ್ವಾಲ್ ಕೇವಲ ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದ್ದು, ಕೇರಳದ ಕೊಚ್ಚಿಯಲ್ಲಿ ಸೇನೆಗೆ ನಿಯೋಜನೆಗೊಂಡಿದ್ದರು. ಅವರ ಸಾವು ತುಂಬಾ ಅಘಾತ ತಂದಿದೆ.

ಅವರ ನೆರೆಹೊರೆಯವರಲ್ಲಿ ಒಬ್ಬರಾದ ನರೇಶ್ ಬನ್ಸಾಲ್, “ಅವರು 4 ದಿನಗಳ ಹಿಂದೆ ವಿವಾಹವಾದರು. ಎಲ್ಲರೂ ಸಂತೋಷವಾಗಿದ್ದರು. ಅವರನ್ನು ಭಯೋತ್ಪಾದಕರು ಕೊಂದಿದ್ದಾರೆ. ಸ್ಥಳದಲ್ಲೇ ನಿಧನರಾದರು ಎಂಬ ಮಾಹಿತಿ ನಮಗೆ ಬಂದಿದೆ. ಅವರು ನೌಕಾಪಡೆಯ ಅಧಿಕಾರಿಯಾಗಿದ್ದರು” ಎಂದಿದ್ದಾರೆ.

ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜಗತ್ತಿನ ಹಲವಾರು ರಾಜಕೀಯ ನಾಯಕರು ಈ ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ರಾಜ್ಯದ ಹಲವಾರು ಸ್ಥಳಗಳಲ್ಲಿ ಕ್ಯಾಂಡಲ್‌ ಬೆಳಕಿನ ಮೆರವಣಿಗೆ ನಡೆಸಿದರು. ಬಾರಾಮುಲ್ಲಾ, ಶ್ರೀನಗರ, ಪೂಂಚ್ ಮತ್ತು ಕುಪ್ವಾರಾದಲ್ಲಿ ಸ್ಥಳೀಯರು ಮೇಣದಬತ್ತಿ ಮೆರವಣಿಗೆ ನಡೆಸಿದರು. ಜಮ್ಮುವಿನಲ್ಲಿ ಬಜರಂಗದಳ ಕಾರ್ಯಕರ್ತರು ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

 

 

Related Articles

Back to top button