“ಬಿಲ್ವಪತ್ರೆ” ನಾನಾ ರೋಗಗಳಿಂದ ಮುಕ್ತಿ

Views: 102
ಕನ್ನಡ ಕರಾವಳಿ ಸುದ್ದಿ: ಬಿಲ್ವಪತ್ರೆಯ ಮರದ ಪ್ರತಿಯೊಂದು ಭಾಗವು, ಎಂದರೆ ಬೇರು, ತೊಗಟೆ, ಪತ್ರೆ ಹಾಗೂ ಕಾಯಿ ಹಣ್ಣು ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ.
ಬಿಲ್ವಪತ್ರೆಯನ್ನು ಭಾರತೀಯ ಸನಾತನ ಸಂಸ್ಕ್ರತಿಯಲ್ಲಿ ಪವಿತ್ರ ಮರ ಎಂದೇ ಹೇಳಲಾಗುತ್ತದೆ. ಪುರಾಣಗಳಲ್ಲಿ ಹೇಳಿದಂತೆ ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಆದ್ದರಿಂದ ಶಿವರಾತ್ರಿಯ ದಿನ ತಪ್ಪದೇ ಬಿಲ್ವಪತ್ರೆ ತಂದು ಶಿವನಿಗೆ ಅರ್ಪಿಸಿ ಪೂಜಿಸುತ್ತಾರೆ.
ಬಿಲ್ವಪತ್ರೆಯ ಎಲೆಗಳ ಕಷಾಯ, ತೊಗಟೆ, ಬೇರುಗಳ ಕಷಾಯ ಮತ್ತು ಹಣ್ಣಿ ನ ತಿರುಗಳ ಉಪಯೋಗದಿಂದ ಅನೇಕ ರೋಗಗಳನ್ನು ಹೋಗಲಾಡಿಸಬಹುದು. ಬಿಲ್ವಪತ್ರೆಯ ಉಪಯೋಗದಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಬಿಲ್ವಪತ್ರೆಯ ಔಷಧಿ ಗುಣಗಳೇನು?
ಬಿಲ್ವಪತ್ರೆಯ ಎಲೆಗಳನ್ನು ನೀರು ಸೇರಿಸಿ, ಅರೆದು, ಆ ಮಿಶ್ರಣವನ್ನು ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚುವುದರಿಂದ ದೃಷ್ಟಿ ವೃದ್ಧಿಯಾಗುತ್ತದೆ.
ಬಿಲ್ವಪತ್ರೆಯನ್ನು ರಾತ್ರಿ ನೀರಿನಲ್ಲಿ ನಿನಸಿಟ್ಟು ಬೆಳಿಗ್ಗೆ ಅದರಿಂದ ಕಣ್ಣನ್ನು ತೊಳೆಯುವುದರಿಂದ ಕಣ್ಣಿನ ಉರಿ, ಕಣ್ಣಿನ ತುರಿಕೆಗಳಿಂದ ಕಣ್ಣಿನ ರಕ್ಷಣೆ ಮಾಡುತ್ತದೆ.
ಬಿಲ್ವಪತ್ರೆ ಎಲೆಯ ಎಣ್ಣೆಯನ್ನು ತಯಾರಿಸಿ, 3 ರಿಂದ 4 ಡ್ರಾಪ್ ಎಣ್ಣೆಯನ್ನು ಕಿವಿಗೆ ಬಿಡುವುದರಿಂದ ಕಿವುಡುತನ ಕಡಿಮೆಯಾಗುತ್ತದೆ.
ಬೇವಿನ ಮರದ ಚಕ್ಕೆ ಮತ್ತು ಬಿಲ್ವಪತ್ರೆಯ ಮರದ ಚಕ್ಕೆ ಎರಡನ್ನೂ ಸಮ ಪ್ರಮಾಣದಲ್ಲಿ ಜಜ್ಜಿ, ಕಷಾಯ ಮಾಡಿ, ಹಾಲಿನೊಂದಿಗೆ ಕುಡಿದರೆ, ಹುಳಿ ತೇಗು, ಪಿತ್ತ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಕಡಿಮೆಯಾಗುತ್ತವೆ.
ದೇಹದ ದುರ್ಗಂಧವನ್ನು ನಿವಾರಿಸಲು, ಬಿಲ್ವಪತ್ರೆಯ ಎಲೆಯ ರಸವನ್ನು, ಪ್ರತಿ ದಿನ ಮೈ ಗೆ ಹಚ್ಚಿಕೊಂಡು, ಅರ್ಧ ಘಂಟೆಯ ನಂತರ ಬಿಟ್ಟು ಸ್ನಾನ ಮಾಡುವುದರಿಂದ, ದೇಹದ ದುರ್ಗಂಧವನ್ನು ತಡೆಗಟ್ಟಬಹುದು.
ಬಿಲ್ವಪತ್ರೆಯ ಎಲೆಗಳನ್ನು ಬಿಸಿ ನೀರಿಗೆ ಹಾಕಿ, ಸ್ನಾನ ಮಾಡುವುದರಿಂದ ಚರ್ಮದ ಮೇಲಾಗುವಂತಹ ಕಜ್ಜಿ, ತುರಿಕೆಗಳನ್ನು ಕಡಿಮೆ ಮಾಡಬಹುದು.
ನಿದ್ರಾಹೀನತೆಯಿಂದ ಬಳಲುತ್ತಿದ್ದವರಿಗೆ ಹೀಗೆ ಮಾಡುವುದರಿಂದ, ನಿದ್ರೆ ಕೂಡ ಚೆನ್ನಾಗಿ ಬರುತ್ತದೆ.
ಪ್ರತಿ ದಿನ ಬಿಲ್ವಪತ್ರೆಯ ರಸವನ್ನು 2 ರಿಂದ 3 ಚಮಚ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.
ಪ್ರತಿದಿನ ಬಿಲ್ವಪತ್ರೆಯ ಕಷಾಯ ಮಾಡಿ, ಕುಡಿಯುವುದರಿಂದ ಮಾನಸಿಕ ಒತ್ತಡಗಳು, ಮಾನಸಿಕ ಉದ್ವೇಗ ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ.
ಬಾಯಿಯಲ್ಲಿ ಹುಣ್ಣಾದಾಗ, ಬಿಲ್ವಪತ್ರೆಯ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ, ದಿನದಲ್ಲಿ 2 ಬಾರಿ ಸೇವಿಸುವುದರಿಂದ, ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.
ಬಿಲ್ವಪತ್ರೆಯ ಹಣ್ಣಿನ ತೊಗಟೆಯನ್ನು ಅರೆದು, ಜೇನು ತುಪ್ಪದಲ್ಲಿ ಸೇವಿಸುವುದರಿಂದ ವಾಂತಿ ಮತ್ತು ವಾಕರಿಕೆ ಬರುವುದು ಕಡಿಮೆಯಾಗುತ್ತದೆ.
ಹೃದಯ ಬಡಿತದ ಸಮಸ್ಯೆ ಇದ್ದವರು ಬಿಲ್ವಪತ್ರೆಯ ಬೇರಿನ ತೊಗಟೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಅದನ್ನು ಅಧಿಕ ರಕ್ತದೊತ್ತಡವಾದಾಗ 1/2 ಅಥವಾ 1 ಚಮಚ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ, ಕಷಾಯ ಮಾಡಿಕೊಂಡು, ತಣಿಸಿ, ದಿನಕ್ಕೆ 2-3 ಬಾರಿ ಕುಡಿಯಬೇಕು.
ಬಿಲ್ವಪತ್ರೆಯ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ. ಆದ್ದರಿಂದ ಪ್ರತಿದಿನ ಬಿಲ್ವಪತ್ರೆಯ ಹಣ್ಣಿನ ಸಿಹಿ ಪಾನಕವನ್ನು ಮಾಡಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
ಬಿಲ್ವಪತ್ರೆಯ ಹಣ್ಣಿನ ತಿರುಳಿಗೆ ಸ್ವಲ್ಪ ಶುಂಠಿ ಮತ್ತು ಸ್ವಲ್ಪ ಜೀರಿಗೆ ಹಾಕಿ, ಕಷಾಯ ಮಾಡಿ ದಿನಕ್ಕೆ 1 ರಿಂದ 2 ಬಾರಿ ಕುಡಿಯುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ. ಕೆಲವರಿ ಕೂದಲಿನದೇ ಚಿಂತೆ. ಕೂದಲು ಉದುರುವುದು, ತಲೆಯಲ್ಲಿನ ಹೊಟ್ಟು, ಕೂದಲಿನಲ್ಲಿ ಸೀಳುವಿಕೆ ಮತ್ತು ಕೂದಲು ಬೆಳೆಯದೆ ಇರುವುದು, ಇವುಗಳನ್ನು ಹೋಗಲಾಡಿಸಲು ಬಿಲ್ವಪತ್ರೆಯು ತುಂಬಾ ಸಹಕಾರಿಯಾಗಿದೆ.