ಕನ್ನಡ ಕರಾವಳಿ ಸುದ್ದಿ: ಪ್ರಸಿದ್ಧ ಪುಣ್ಯಕ್ಷೇತ್ರ ಕುಂಭಾಶಿಯ ಸಮೀಪದ ಪುಟ್ಟ ಗ್ರಾಮ ಗೋಪಾಡಿಯಲ್ಲಿ ಇದೀಗ ಸಂತಸ – ಸಡಗರ ತುಂಬಿದೆ. ಕಾರಣ, ಗ್ರಾಮದ ಕೇಂದ್ರಬಿಂದು, ಗ್ರಾಮಸ್ಥರ ಶ್ರದ್ಧಾ ಕೇಂದ್ರ ಶ್ರೀ ಕಾಂತೇಶ್ವರ ದೇವಾಲಯದಲ್ಲಿ ಹಲವು ವೈಶಿಷ್ಟ್ಯತೆಗಳಿಂದ ಕೂಡಿದ ಅಖಂಡ ಭಜನೋತ್ಸವ ಆರಂಭಗೊಂಡಿದೆ. ಶ್ರೀ ಕಾಂತೇಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ, ಶ್ರೀ ಕಾಂತೇಶ್ವರನ ಸನ್ನಿಧಿಯಲ್ಲಿ ಭಜನಾ ಸಪ್ತಾಹದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ.
ಫೆ.17ರ ಸೋಮವಾರದಿಂದ ಫೆ. 23 ರ ಭಾನುವಾರದವರೆಗೆ ಅಖಂಡ ಭಜನೋತ್ಸವ ನಡೆಯುತ್ತಿದೆ.
ಈ ಭಜನಾ ಸಪ್ತಾಹದ ಅಮೃತ ಮಹೋತ್ಸವಾಚರಣೆಗಾಗಿ ಇಡೀ ಗೋಪಾಡಿ ಗ್ರಾಮವೇ ತೆರೆದುಕೊಂಡಿದೆ. ತಿಂಗಳುಗಳ ಮೊದಲಿನಿಂದಲೇ ಈ ಬಗ್ಗೆ ಅದ್ದೂರಿ ತಯಾರಿಗಳನ್ನು ನಡೆಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಸ್ವಾಗತ ಕಮಾನು ರಚಿಸಿ, ವರ್ಣಮಯ ವಿದ್ಯುತ್ ದೀಪಗಳು ಪುಷ್ಪ, ತೋರಣಗಳಿಂದ ಸಿಂಗರಿಸಲಾಗಿದೆ. ದೇವಾಲಯದೊಳಗೆ ಹೆಂಗಳೆಯರ ಕಸೂತಿಯಿಂದ ಅರಳಿದ ಬಹುವರ್ಣಗಳ ಉಲ್ಲನ್ ಹೂವುಗಳು, ಬಳ್ಳಿಗಳು, ಮಾಲೆಗಳು ಮನಸೆಳೆಯುತ್ತವೆ. ಬಣ್ಣ ಬಣ್ಣದ ಬಟ್ಟೆಗಳಲ್ಲಿ ಅರಳಿದ ಈ ಹೂವುಗಳು ನೈಜ ಪುಷ್ಪಗಳಂತೆಯೇ ಆಕರ್ಷಕವಾಗಿವೆ. ಈ ಸಮಾರಂಭಕ್ಕೆ ಮಠಾಧೀಶರುಗಳು ಆಗಮಿಸುತ್ತಿದ್ದು, ಅವರ ಸೂಚನೆಯತೆ ಪ್ಲಾಸ್ಟಿಕ್ ಬದಲಾಗಿ ಉಲ್ಲನ್ ಹೂವುಗಳು, ತೋರಣಗಳು, ಬಟ್ಟೆಯ ಕಸೂತಿಯನ್ನು ಬಳಸಲಾಗಿದೆ ಎಂದು ಶ್ರೀ ಕಾಂತೇಶ್ವರ ಸೇವಾ ಸಮಿತಿ ಅಧ್ಯಕ್ಷ ಜಿ ಪಿ ಮಂಜುನಾಥ ಹತ್ವಾರ್ ಹೇಳಿದ್ದಾರೆ.
ಬಿದಿರಿನ ಜೋಡಣೆಯೂ ಆಕರ್ಷಕವಾಗಿದೆ. ಕೆಲವು ತಿಂಗಳ ಮೊದಲೇ ಗ್ರಾಮದ ಮನೆ ಮನೆಯಲ್ಲಿ ಮಹಿಳೆಯರು ಉಲ್ಲನ್ ದಾರದಿಂದ ಹೂವು, ತೋರಣ ತಯಾರಿ, ಬಟ್ಟೆಯ ಕಸೂತಿ ಕೆಲಸಗಳನ್ನು ಮಾಡಿ ಇದೀಗ ದೇವಾಲಯದಲ್ಲಿ ಆಕರ್ಷಕವಾಗಿ ಜೋಡಣೆ ಮಾಡಿದ್ದು, ನೋಡುಗರ ಮೆಚ್ಚುಗೆ ಗಳಿಸಿದೆ. ಹೊರಭಾಗದಲ್ಲಿನ ಅಲಂಕಾರಕ್ಕಾಗಿ ತೆಂಗಿನ ಕರಟಗಳನ್ನು ಕಲಾತ್ಮಕವಾಗಿ ಬಳಸಿಕೊಳ್ಳಲಾಗಿದ್ದು ಆಕರ್ಷಕವಾಗಿದೆ.
ಈ ವಿಶೇಷ ಅಲಂಕಾರ ಕಾರ್ಯಗಳಲ್ಲಿ ಮಂಜುನಾಥ ಹತ್ವಾರ್, ಕೃಷ್ಣಮೂರ್ತಿ ಹತ್ವಾರ್, ಶ್ರೀಪತಿ ಉಪಾಧ್ಯ, ಶ್ರೀನಿವಾಸ ಹತ್ವಾರ್, ನರಸಿಂಹಮೂರ್ತಿ ಬುಧ್ಯ, ಸೀತಾರಾಮ ಧನ್ಯ, ಭಾಗ್ಯಲಕ್ಷ್ಮೀ ಧನ್ಯ, ರೂಪ, ಸುಷ್ಮಾ, ಸುಮಾಶ್ರೀ ಧನ್ಯ, ಲಲಿತ, ಲೀಲಾ, ನಿವೇದಿತಾ, ಭೂಮಿಕಾ, ಲೀಲಾ ಉಪಾಧ್ಯ, ಪುಷ್ಪ ಭಟ್, ಸುಧಾ ಭಟ್ ಇನ್ನೂ ಹಲವರು ಕೈ ಜೋಡಿಸಿದ್ದಾರೆ.
ದಿ. ಮೂಡುಗೋಪಾಡಿ ಶ್ರೀನಿವಾಸ ಭಟ್ ವೇದಿಕೆಯಲ್ಲಿ ಸೋಮವಾರ ನಸುಕಿನಲ್ಲಿ ರಥದೀಪ ಸ್ಥಾಪನಾ ಸಂಕಲ್ಪ ನೆರವೇರಿಸಿ, ಶ್ರೀ ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಅಖಂಡ ಭಜನೆಗೆ ಚಾಲನೆ ನೀಡಲಿದ್ದಾರೆ. ಆ ನಂತರ ವಿವಿಧ ತಂಡಗಳಿಂದ ಹಾಗೂ ವಯಕ್ತಿಕವಾಗಿಯೂ ಈ ರಥದೀಪಕ್ಕೆ ಪ್ರದಕ್ಷಿಣೆಯಲ್ಲಿ ಕುಣಿತ ಭಜನೆ ಆರಂಭಗೊಳ್ಳುವುದು. ವಿಶೇಷ ಆಕರ್ಷಣೆಯಾಗಿ ಚಿಂತಾಮಣಿ ದಾಸರ ವಿಶೇಷ ಕುಣಿತ, ಯೋಗೀಶ ಹತ್ವಾರರಿಂದ ಶೀರ್ಷಾಸನ ಕುಣಿತ ಭಜನೆ ನಡೆಯಲಿದೆ.
ಭಜನೋತ್ಸವದ ಅಂಗವಾಗಿ ಈಗಾಗಲೇ ಶ್ರೀ ನಾಗ ಸನ್ನಿಧಿಯಲ್ಲಿ ನವಕ ಪ್ರದಾನ ಹೋಮ ನಡೆಸಲಾಗಿದೆ. ಗಣಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ಪೂರೈಸಲಾಗಿದೆ. ಒಂದು ವಾರ ಕಾಲ ವಿವಿಧ ಹೋಮಗಳು, ಕಲಶಾಭಿಷೇಕಗಳು ನಡೆಯುತ್ತವೆ.
ಫೆ. 23 ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವ ವಲ್ಲಭ ತೀರ್ಥ ಸ್ವಾಮಿಗಳು ಆಗಮಿಸುವರು. ಬೆಳಿಗ್ಗೆ 10.30 ಕ್ಕೆ ದೀಪ ರಥೋತ್ಸವದೊಂದಿಗೆ ಭಜನಾ ಮಂಗಲ ನೆರವೇರುವುದು. ಸಂಜೆ 3 ಗಂಟೆಗೆ ಶ್ರೀ ಕಾಂತೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಜಿ ಪಿ ಮಂಜುನಾಥ ಹತ್ವಾರ್ ಅಧ್ಯಕ್ಷತೆಯಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಶ್ರೀ ಸೋದೆ ಸ್ವಾಮಿಗಳು ದಿವ್ಯ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡುವರು. ಈ ಸಭೆಯಲ್ಲಿ ಗ್ರಾಮದ ಶತಾಯುಷಿ ಗೋಳಿಬೆಟ್ಟು ಪರಮೇಶ್ವರ ಭಟ್ ಹಾಗೂ ಮಾಗಣೆಯ ಹಿರಿಯ ಭಜನಕಾರರಾದ ಚಿಂತಾಮಣಿ ಗೋಪಾಲ ರಾವ್, ಸುಬ್ರಹ್ಮಣ್ಯ, ಭಜನಕಾರ್ತಿಯರಾದ ಸೀತಮ್ಮ, ಸರ್ವಮಂಗಳ ಹಾಗೂ ದೇವಳದ ಹಿರಿಯ ಸೇವಕ ರಾಮ ಮಡಿವಾಳರನ್ನು ಸನ್ಮಾನಿಸಿ ಗೌರವಿಸಲಾಗುವುದು. ಗ್ರಾಮದ ಹಿರಿಯರ ಕುರಿತಾದ ಕೃತಿ ‘ನೆನಪಿನ ಹೊತ್ತಿಗೆ’ ಹಾಗೂ ವಿದ್ವಾನ್ ಜಿ ಕೆ ರಾಘವೇಂದ್ರ ಭಟ್ ರಚಿತ ‘ಮಹಾರುದ್ರ ದೇವರು’ ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು.