ಪಹಲ್ಗಾಮ್ ದಾಳಿ ಹಿನ್ನೆಲೆ: ಕರಾವಳಿ ಸಮುದ್ರ ತೀರದಲ್ಲಿ ನೌಕಾಪಡೆ, ಕಾವಲು ಪಡೆ ವಿಶೇಷ ಕಣ್ಣಾವಲು

Views: 45
ಕನ್ನಡ ಕರಾವಳಿ ಸುದ್ದಿ: ಪಹಲ್ಗಾಮ್ ನಲ್ಲಿ ನಡೆದ ಘಟನೆ ಹಾಗೂ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕರಾವಳಿ ತೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಜಂಟಿಯಾಗಿ ಭದ್ರತಾ ಕಾರ್ಯಾ ಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮುದ್ರದಲ್ಲಿ ಗಸ್ತು ಕಾರ್ಯಾಚರಣೆಯ ಅವಧಿಯನ್ನು ಹೆಚ್ಚಿಸಲಾಗಿದೆ. ಮೂರು ಜಿಲ್ಲೆಯ ಕರಾವಳಿ ತೀರದ 324 ಕಿ.ಮೀ.ನಲ್ಲಿ 1 ಕಿ.ಮೀ.ಗೆ ತಲಾ ಇಬ್ಬರಂತೆ ಸಿಬಂದಿ ನಿಯೋಜನೆಗೊಳಿಸಲಾಗಿದೆ.
ರಜಾ ಸಮಯವಾದ ಕಾರಣ ಸಮುದ್ರ ತೀರದ ಸಮೀಪವಿರುವ ರೆಸಾರ್ಟ್ಗಳಿಗೆ ಹಲವಾರು ಮಂದಿ ಭೇಟಿ ನೀಡಿ ಕಾಲ ಕಳೆಯುತ್ತಾರೆ. ಈ ಬಗ್ಗೆ ಮುಂಚಿತವಾಗಿ ರೆಸಾರ್ಟ್ ಮಾಲಕರಿಗೂ ಸೂಚನೆ ನೀಡಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಮುಖ್ಯವಾಗಿ ವಿದೇಶಿ ಪ್ರಜೆಗಳ ಚಲನವಲನ ಹಾಗೂ ಸಮುದ್ರ ತೀರ ಪ್ರದೇಶಗಳಿಗೆ ಭೇಟಿ ನೀಡುವವರ ಬಗ್ಗೆ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯರೊಂದಿಗೂ ಪೊಲೀಸರು ಸಂಪರ್ಕ ಇರಿಸಿದ್ದು, ಅವರಿಂದಲೂ ವಿವಿಧ. ರೀತಿಯಮಾಹಿತಿ ಸಂಗ್ರಹದಲ್ಲಿ ನಿರತರಾಗಿದ್ದಾರೆ.
ಕರಾವಳಿ ಕಾವಲು ಪಡೆಯಲ್ಲಿ ಈಗಾಗಲೇ 340 ಮಂದಿ ಸಿಬಂದಿಯಿದ್ದಾರೆ. ಅಧಿಕ 180ಮಂದಿ ಕರಾವಳಿ ನಿಯಂತ್ರಣ ದಳ ದಲ್ಲಿದ್ದಾರೆ. 30 ಮಂದಿ ತಾಂತ್ರಿಕ ಸಿಬಂದಿ, 13 ಬೋಟ್ಗಳು ಹಾಗೂ ಜೆಟ್ಗಳ ಮೂಲಕ ನಿರಂತರ ಗಸ್ತು ಕಾರ್ಯಾಚರಣೆ ನಡೆಯುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಗೊಳಪಡಿಸುವ ಪ್ರಕ್ರಿಯೆಯೂ ನಿರಂತರವಾಗಿ ನಡೆಯುತ್ತಿದೆ ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಅವರು ತಿಳಿಸಿದ್ದಾರೆ.