ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಜೀವ ಬೆದರಿಕೆ: ಮೂವರು ಅರೆಸ್ಟ್
Views: 34
ಕನ್ನಡ ಕರಾವಳಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ನಲ್ಲಿ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ದರ್ಶನ್ ಅಭಿಮಾನಿಗಳು ಸಾಕ್ಷಿ ಹೇಳದಂತೆ ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಸಂದೀಪ್ ನ್ಯಾಯಾಲಯದ ಮೆಟ್ಟಿಲೇರಿ ತಮ್ಮ ನೋವನ್ನು ಹೇಳಿಕೊಂಡಿದ್ದರು.
ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಕೆಯಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಸಂದೀಪ್ಗೆ ಸೂಕ್ತ ರಕ್ಷಣೆ ನೀಡಿ, ಬೆದರಿಕೆ ಹಾಕಿದವರಿಗಾಗಿ ಜಾಲ ಬೀಸಿದ್ದರು. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ‘ಡಿ ಕಂಪನಿ’ ಫ್ಯಾನ್ಸ ಪೇಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಸದ್ಯ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ‘ಡಿ ಕಂಪನಿ’ ಹೆಸರಿನ ಸೋಶಿಯಲ್ ಮೀಡಿಯಾ ಫ್ಯಾನ್ ಪೇಜ್ ಅಡ್ಮಿನ್ ಪುನೀತ್, ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾದ ಸುಹಾಸ್ ಮತ್ತು ವೇಣು ಎಂದು ತಿಳಿದು ಬಂದಿದೆ.
ಆರೋಪಿಗಳ ಪೈಕಿ ಸುಹಾಸ್, ಸಾಕ್ಷಿ ಸಂದೀಪ್ನನ್ನು ಏನೋ ಮಾತುಕತೆ ನಡೆಸಬೇಕು ಎಂಬ ನೆಪದಲ್ಲಿ ಕರೆಸಿಕೊಂಡಿದ್ದನು. ನಂತರ ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸುತ್ತಾ, “ನ್ಯಾಯಾಲಯದಲ್ಲಿ ದರ್ಶನ್ ವಿರುದ್ಧ ಸಾಕ್ಷಿ ಹೇಳಬಾರದು” ಎಂದು ತಾಕೀತು ಮಾಡಿದ್ದ. ಇದಕ್ಕೆ ಸಂದೀಪ್ ಒಪ್ಪದಿದ್ದಾಗ ಆತನಿಗೆ ಪ್ರಾಣ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಸದ್ಯ ಬಂಧಿತ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ದರ್ಶನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಹೋರಾಟ ಅಂತಿಮ ಹಂತಕ್ಕೆ ಬರುತ್ತಿರುವಾಗಲೇ, ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಈ ಹೊಸ ಘಟನೆ ದರ್ಶನ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಮುಂದಿನ ದಿನ ಈ ಕೇಸ್ ಯಾವ ಹಂತ ಪಡೆಯುತ್ತೆ ಅಂತ ಕಾಯ್ದು ನೋಡಬೇಕಿದೆ.






