ಇತರೆ
ಉಪ್ಪುಂದ: ವಾಕಿಂಗ್ ಮಾಡುತ್ತಿದ್ದಾಗ ರಸ್ತೆಯಲ್ಲಿ ಕುಸಿದು ಬಿದ್ದು ಚೇತರಿಸಿದರೂ ಮನೆಗೆ ಬಂದ ಬಳಿಕ ಸಾವು
Views: 107
ಕನ್ನಡ ಕರಾವಳಿ ಸುದ್ದಿ: ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಾಗ ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿ ಚೇತರಿಸಿಕೊಂಡು ಮನೆಗೆ ಬಂದವರು ಮತ್ತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಉಪ್ಪುಂದ ಗ್ರಾಮದಲ್ಲಿ ಸಂಭವಿಸಿದೆ.
ಉಪ್ಪುಂದ ಗ್ರಾಮದ ಜನತಾ ಕಾಲನಿ ಪುಟ್ಟಮನೆ ಸೀತಾರಾಮ ಖಾರ್ವಿ (52) ಮೃತಪಟ್ಟ ವ್ಯಕ್ತಿ. ಮಾ.2ರಂದು ಬೆಳಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬಂದಿದ್ದ ಅವರು ಮನೆಯವರಲ್ಲಿ ವಾಕಿಂಗ್ ಮಾಡುವಾಗ ದಾರಿ ಮಧ್ಯೆ ಕುಸಿದು ಬಿದ್ದು ಸುಧಾರಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದರು. ಮನೆಯವರ ಬಳಿ ಮಾತನಾಡಿದ ಸ್ವಲ್ಪ ಸಮಯದ ಬಳಿಕ ಅವರು ಮತ್ತೆ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡರು. ಅವರನ್ನು ಬೈಂದೂರು ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು, ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






