ಇತರೆ

ಜ್ಯೋತಿಷಿಯ ಮಾತು ಕೇಳಿ ಹೆತ್ತಬ್ಬೆಯ ಉಸಿರು ನಿಲ್ಲಿಸಿದ ಮಗಳು..!

Views: 48

ಕನ್ನಡ ಕರಾವಳಿ ಸುದ್ದಿ: ಜ್ಯೋತಿಷಿಯ ಮಾತು ಕೇಳಿ ಹೆತ್ತ ಮಗಳೇ ತಾಯಿಯನ್ನು ಕೊಲೆ ಮಾಡಿರುವ ಘಟನೆ ತುಮಕೂರಿನ ಅನುಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಳಿಕ ಇದು ಅಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆಗೆ ಸಿದ್ಧಳಾಗಿದ್ದಾಳೆ. ಆದರೆ, ಅದ್ಯಾವಾಗ ಗ್ರಾಮಸ್ಥರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ರೋ ಈ ವೇಳೆ ಸತ್ಯ ಬಯಲಾಗಿದೆ.

ಪುಷ್ಪವತಿ (55) ಕೊಲೆಯಾದ ತಾಯಿ. ಸುಚಿತ್ರಾ (33) ಕೊಲೆಗೈದ ಪಾಪಿ ಮಗಳು.

ಸುಚಿತ್ರಾ ತುಮಕೂರು ನಗರದ ಶ್ರೀನಗರದಲ್ಲಿ ತನ್ನ ಗಂಡನೊಂದಿಗೆ ವಾಸವಿದ್ದು, ಕೆಲ ದಿನಗಳ ಹಿಂದೆ ಅನುಪನಹಳ್ಳಿ ಗ್ರಾಮದಲ್ಲಿರುವ ತಾಯಿಯ ಮನೆಗೆ ಬಂದಿದ್ದಳು ಎನ್ನಲಾಗಿದೆ.

ಸುಮಾರು ಒಂದೂವರೆ ವರ್ಷಗಳ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ತಂದೆಯ ಅಗಲಿಕೆಗೆ ಕಾರಣ ಹುಡುಕಲು ಸುಚಿತ್ರಾ ಆನ್‌ಲೈನ್ ಮೂಲಕ ಜ್ಯೋತಿಷಿಯೊಬ್ಬರ ಸಂಪರ್ಕಿಸಿದ್ದಳು. ಈ ವೇಳೆ ಜ್ಯೋತಿಷಿ, “ನಿನ್ನ ತಂದೆಯ ನಿಧನಕ್ಕೆ ನಿನ್ನ ತಾಯಿಯೇ ಕಾರಣ. ಆಕೆ ಮಾಟ-ಮಂತ್ರ ಮಾಡಿಸಿ ತಂದೆಯನ್ನ ಬಲಿಪಡೆದಿದ್ದಾಳೆ” ಎಂದು ಸುಳ್ಳು ಹೇಳಿ ನಂಬಿಸಿದ್ದ ಎನ್ನಲಾಗಿದೆ.

ಇದೇ ಕಾರಣದಿಂದ ತಾಯಿಯ ಮೇಲಿನ ದ್ವೇಷ ಬೆಳೆಸಿಕೊಂಡು ಪುಷ್ಪವತಿ ಮನೆಯೊಳಗೆ ನಿದ್ರಿಸುತ್ತಿದ್ದ ವೇಳೆ ಸುಚಿತ್ರಾ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬುದು ತನಿಖೆ ವೇಳೆ ಬಯಲಾಗಿದೆ. ಜ್ಯೋತಿಷಿಯ ಮಾತು ಕೇಳಿ ಹೆತ್ತಬ್ಬೆಯ ಉಸಿರು ನಿಲ್ಲಿಸಿದಾಕೆ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾಳೆ.

Related Articles

Back to top button
error: Content is protected !!