ಲಿಫ್ಟ್ನಲ್ಲಿ ನಾಯಿ ಹತ್ಯೆಗೂ ಮುನ್ನ ಚಿನ್ನಾಭರಣ, ವಜ್ರದ ಉಂಗುರ ಕದ್ದಿದ್ದಳೇ ಮನೆಕೆಲಸದಾಕೆ?
Views: 124
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಬಾಗಲೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಲಿಫ್ಟ್ನಲ್ಲಿ ನಾಯಿಮರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ಆರೋಪಿ ಮನೆಕೆಲಸದಾಕೆ ಪುಷ್ಪಲತಾ ಅವರ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ತಾನಿದ್ದ ಮನೆಯ ಮಾಲೀಕರಾದ ರಾಶಿಕಾ ಅವರ ಚಿನ್ನಾಭರಣಗಳನ್ನು ಕಳವು ಮಾಡಿದ್ದಾಗಿ ತನಿಖೆಯ ವೇಳೆ ಪುಷ್ಪಲತಾ ಒಪ್ಪಿಕೊಂಡಿದ್ದಾಳೆ.
ನವೆಂಬರ್ 2 ರಂದು ರಾಶಿಕಾ ಅವರ ಮನೆಯ ವಾರ್ಡ್ ರೋಬ್ನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು. ಸುಮಾರು 50 ಗ್ರಾಂ ಮೌಲ್ಯದ ಚಿನ್ನದ ಸರ, ಒಂದು ಸಾಮಾನ್ಯ ಉಂಗುರ ಹಾಗೂ ಒಂದು ವಜ್ರದ ಉಂಗುರ ಕಳುವಾಗಿದ್ದವು. ಮನೆ ಮಾಲೀಕರು ಪುಷ್ಪಲತಾಳ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಆರೋಪಿ ಕೃತ್ಯ ಒಪ್ಪಿಕೊಂಡಿದ್ದಾಳೆ.
ಮನೆ ಮಾಲೀಕರಾದ ಯುವತಿ ರಾಶಿಕಾ ಕಾಲೇಜಿಗೆ ಹೋದಾಗ ಪುಷ್ಪಲತಾ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಇದೇ ಸಮಯವನ್ನು ಬಳಸಿಕೊಂಡು ಆಕೆ ಡ್ರಾಯರ್ನಲ್ಲಿದ್ದ ಆಭರಣಗಳನ್ನು ಕದ್ದು, ತಾನು ಮಲಗುತ್ತಿದ್ದ ಮಂಚದ ಕೆಳಗೆ ಬಚ್ಚಿಟ್ಟಿದ್ದಳು ಎಂದು ತಿಳಿದುಬಂದಿದೆ. ಕಳ್ಳತನ ಎಸಗಿದ ಬಳಿಕ ಆಕೆ ಮನೆಯಲ್ಲಿದ್ದ ನಾಯಿಮರಿಯನ್ನು ಅಮಾನವೀಯವಾಗಿ ಸಾಯಿಸಿದ್ದಳು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ನಾಯಿಮರಿ ಹತ್ಯೆ ಮತ್ತು ಚಿನ್ನಾಭರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.






