ಮಹಿಳೆಯೊಂದಿಗೆ ವ್ಯಕ್ತಿಯೋರ್ವನ ಅಕ್ರಮ ಸಂಬಂಧ: ನ್ಯಾಯ ಕೊಡಿಸಲು ಹೋದವನೇ ಆತ್ಮಹತ್ಯೆ!
Views: 77
ಕನ್ನಡ ಕರಾವಳಿ ಸುದ್ದಿ: ಮಹಿಳೆಯೊಬ್ಬರಿಗೆ ನ್ಯಾಯ ಕೊಡಿಸಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ವ್ಯಕ್ತಿಯೋರ್ವನ ಅಕ್ರಮ ಸಂಬಂಧದ ವಿಚಾರವನ್ನು ಆತನ ಪತ್ನಿಗೆ ತಿಳಿಸಿದ ಯುವಕನೊಬ್ಬ ಸಾವಿನ ದಾರಿ ಹಿಡಿದ ಘಟನೆ ತುಮಕೂರಿನ ರಾಮೇನಹಳ್ಳಿ ಎಂಬಲ್ಲಿ ನಡೆದಿದೆ.
ಚೇತನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಟ್ಟೆ ನಾಗರಾಜ್ ಎಂಬಾತ ಮಹಿಳೆಯೋರ್ವಳ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬುದಾಗಿ ಚೇತನ್ ಕಟ್ಟೆ ನಾಗರಾಜನ ಪತ್ನಿಗೆ ತಿಳಿಸಿದ್ದಾನೆ. ಈ ವಿಚಾರ ತಿಳಿದ ಕಟ್ಟೆ ನಾಗರಾಜ್ ಕುಪಿತನಾಗಿ ಚೇತನ್ ಜತೆ ಗಲಾಟೆ ಮಾಡಿದ್ದಲ್ಲದೆ ಬೆದರಿಕೆ ಕೂಡ ಹಾಕಿದ್ದ. ಇದರಿಂದ ಮನನೊಂದ ಚೇತನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸೆಲ್ಸಿ ವೀಡಿಯೋ ಮಾಡಿ ಆತ್ಮಹತ್ಯೆ :
ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಮಾಹಿತಿ ಲಭಿಸಿದ್ದರಿಂದ ಕಟ್ಟೆ ನಾಗರಾಜ್ ಮತ್ತು ಪತ್ನಿ ಸುಮಾ ನಡುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ತನಗೆ ಚೇತನ್ ಎಂಬಾತ ಈ ವಿಚಾರ ತಿಳಿಸಿದ್ದಾಗಿ ಗಂಡನಿಗೆ ಆಕೆ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ನಾಗರಾಜ್, ಚೇತನ್ ಜತೆ ಜಗಳ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಹೆದರಿದ ಚೇತನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆದರೆ ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್ನಲ್ಲಿ ಸೆಲ್ಸಿ ವೀಡಿಯೋ ಮಾಡಿರುವ ಚೇತನ್, ತನ್ನ ಸಾವಿಗೆ ಕಟ್ಟೆ ನಾಗರಾಜ್ ಕಾರಣ ಎಂದು ಹೇಳಿದ್ದಾನೆ. ಘಟನೆಯ ಬಗ್ಗೆ ಮೊದಲು ಹೆಬ್ಬರು ಠಾಣೆಯ ಪೊಲೀಸರು ಆತ್ಮಹತ್ಯೆ ಎಂದು ದೂರು ದಾಖಲಿಸಿಕೊಂಡಿದ್ದರು.
ಚೇತನ್ ಮೊಬೈಲ್ನಲ್ಲಿದ್ದ ವೀಡಿಯೋ ನೋಡಿದ ತಂದೆ ಹೆಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.






