ಇತರೆ

ಮದುವೆಯಾಗಲೆಂದು ಹೊರಟಿದ್ದ ಜೋಡಿಯ ಕಾರು ಅಪಘಾತ,: ಹುಡುಗ ಆಸ್ಪತ್ರೆಗೆ, ಹುಡುಗಿ ಪರಾರಿ

Views: 108

ಕನ್ನಡ ಕರಾವಳಿ ಸುದ್ದಿ: ಮದುವೆಯಾಗಲೆಂದು ಹೊರಟಿದ್ದ ಜೋಡಿಯ ಕಾರು ಅಪಘಾತಕ್ಕೀಡಾಗಿ ಹುಡುಗ ಆಸ್ಪತ್ರೆ ಸೇರಿದ್ದರೆ, ಹುಡುಗಿ ಮರ್ಯಾದೆಗಂಜಿ ಪರಾರಿಯಾಗಿದ್ದಾರೆ. ಹಾವೇರಿ ಜಿಲ್ಲೆಯಿಂದ ಹೀಗೊಂದು ಘಟನೆ ವರದಿಯಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮದುವೆಯಾಗಲು ಹೋಗುತ್ತಿದ್ದ ವೇಳೆ ಕಾರು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡು, ಯುವತಿ ಪರಾರಿಯಾದ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ಗ್ರಾಮದ ಬಳಿ ನಡೆದಿದೆ. ಗಾಯಗೊಂಡ ಯುವಕ ಮತ್ತು ಆತನ ಇಬ್ಬರು ಸ್ನೇಹಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ಸ್ವಲ್ಪದರಲ್ಲಿಯೇ ಪಾರಾದ ಯುವತಿ ಮರ್ಯಾದೆಗಂಜಿ ಪರಾರಿಯಾಗಿದ್ದಾಳೆ.

ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಹಿರೇಕೆರೂರು ತಾಲೂಕಿನ ಯುವತಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಪೋಷಕರ ಕಣ್ಣು ತಪ್ಪಿಸಿ ಮದುವೆಯಾಗುವ ಯೋಚನೆಯಲ್ಲಿದ್ದರು. ಕೆಲ ದಿನಗಳ ಹಿಂದೆ ಯುವತಿ ಜಾತ್ರೆಗೆಂದು ಊರಿಗೆ ಬಂದಿದ್ದಳು. ಈ ವೇಳೆ ಯುವತಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುವ ತಯಾರಿಯಲ್ಲಿದ್ದ ಯುವಕ, ಇದಕ್ಕಾಗಿ ಇಬ್ಬರು ಸ್ನೇಹಿತರ ಜೊತೆಗೆ ಹಿರೇಕೆರೂರು ತಾಲೂಕಿಗೆ ಬಂದಿದ್ದರು.

ಯುವಕನಿಗೆ ಆತ ಇಬ್ಬರು ಗೆಳೆಯರು ಸಾಥ್‌ ಕೊಟ್ಟಿದ್ದು, ಯುವತಿಯನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಯುವತಿಯ ಪೋಷಕರು ಹುಡುಕುತ್ತಾ ಬರಬಹುದು ಎಂಬ ಭಯದಲ್ಲಿ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಚನ್ನಹಳ್ಳಿ ತಾಂಡಾ ಬಳಿ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ.

ಅಪಘಾತದ ತೀವ್ರತೆಗೆ ಕಾರಿನೊಳಗಿದ್ದ ಮೂವರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವತಿ ಮಾತ್ರ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆಗೆ ದೊಡ್ಡ ಮಟ್ಟಿನ ಗಾಯವಾಗಿರಲಿಲ್ಲ ಎಂದು ಹೇಳಲಾಗಿದೆ. ಊರ ಬಳಿಯೇ ಕಾರು ಪಲ್ಟಿಯಾದ ಕಾರಣ ರಕ್ಷಣೆಗೆ ಜನ ಸೇರಿದ್ದಾರೆ. ಸಹಜವಾಗಿಯೇ ಯಾರು ಏನು ಎತ್ತ ಎಂದು ವಿಚಾರಿಸತೊಡಗಿದ್ದಾರೆ. ಈ ವೇಳೆ ಪ್ರಿಯಕರ ಮತ್ತು ಅವರ ಉಳಿದ ಗೆಳೆಯರು ಆಸ್ಪತ್ರೆಯ ಕಡೆಗೆ ತೆರಳಿದರೆ ಯುವತಿ ಮಾತ್ರ ಮರ್ಯಾದೆಗೆ ಅಂಜಿ ಅಲ್ಲಿಂದ ಹೊರಡಲು ತೀರ್ಮಾನಿಸಿದರು. ಬಳಿಕ ಅವರಿವರ ಬಳಿ ಡ್ರಾಪ್‌ ಪಡೆದು ಬೆಂಗಳೂರಿಗೆ ತೆರಳುವ ಬಸ್‌ ಹಿಡಿದು ಮನೆ ಸೇರಿದ್ದಾಳೆ. ಹಿರೇಕೆರೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

 

 

 

 

Related Articles

Back to top button
error: Content is protected !!