ತ್ರಿಬಲ್ ಮರ್ಡರ್: ತಾಯಿ, ಅಜ್ಜಿ, ಮಾವನನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ಯುವಕ
Views: 63
ಕನ್ನಡ ಕರಾವಳಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬ ತಾಯಿ, ಅಜ್ಜಿ ಹಾಗೂ ಮಾವನನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ.
ಬೆಂಗಳೂರಿನ ಕೊಟ್ಟಿಗೆಪಾಳ್ಯದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಹಾಗೂ ಮಾವ ಸತೀಶ್ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಶಾಂತ್ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಾವ ಕಾಅರಣಕ್ಕೆ ಯುವಕ ಕೊಲೆಗೈದಿದ್ದನೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡಿಸಿಪಿ ಮಾಹಿತಿ: ”ಇಂದು ಬೆಳಿಗ್ಗೆ ತಂದೆ ಮನೆಯಲ್ಲಿರದಿದ್ದಾಗ ಮಾರಕಾಸ್ತ್ರ ಬಳಸಿ ಪ್ರಶಾಂತ್ ಮೂವರನ್ನೂ ಹತ್ಯೆಗೈದಿದ್ದಾನೆ. ಮನೆಯವರ ಕಿರುಚಾಟ ಕೇಳಿ ಧಾವಿಸಿದ್ದ ಅಕ್ಕಪಕ್ಕದವರು ಆರೋಪಿ ಪ್ರಶಾಂತ್ನನ್ನ ಹಿಡಿದು ರೂಮ್ನಲ್ಲಿ ಕೂಡಿ ಹಾಕಿದ್ದಾರೆ. ಇದಾದ ನಂತರ ರೂಮ್ನಲ್ಲಿಯೇ ಪ್ರಶಾಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಶಾಂತ್ ಮಾನಸಿಕ ಆರೋಗ್ಯದ ಸಮಸ್ಯೆ ಹೊಂದಿದ್ದ ಎಂದು ಹೇಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ” ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ತಿಳಿಸಿದ್ದಾರೆ.
”ತಾಯಿಯೊಂದಿಗೆ ಪ್ರಶಾಂತ್ ಸಣ್ಣಪುಟ್ಟ ಗಲಾಟೆ ಮಾಡುತ್ತಿದ್ದ. ರಾತ್ರಿ ಏನೂ ಜಗಳವಾಗಿರಲಿಲ್ಲ. ನಾನು ಬೆಳಗ್ಗೆ ಇಸ್ತ್ರಿ ಅಂಗಡಿ ತೆರೆಯಲು ಹೋದೆ. ಆತ ಮನೆಯಲ್ಲಿ ಈ ರೀತಿ ಮಾಡಿದ್ದಾನೆ. ನಾನು ಮನೆಯಲ್ಲಿದ್ದಿದ್ದರೆ ನನ್ನನ್ನೂ ಮುಗಿಸಿ ಬಿಡುತ್ತಿದ್ದನೇನೋ ಗೊತ್ತಿಲ್ಲ. ಅವನಿಗೆ ಜ್ಞಾನ ಸರಿಯಾಗಿಯೇ ಇತ್ತು. ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯಾಕೆ ಈ ರೀತಿ ಮಾಡಿದ್ದಾನೋ ಗೊತ್ತಾಗುತ್ತಿಲ್ಲ” ಎಂದು ಪ್ರಶಾಂತ್ನ ತಂದೆ ಚಿಕ್ಕಣ್ಣ ತಿಳಿಸಿದ್ದಾರೆ.






