ತೆಂಗಿನ ಮರದಲ್ಲೇ ಹೃದಯಾಘಾತದಿಂದ ವ್ಯಕ್ತಿ ಸಾವು
Views: 128
ಕನ್ನಡ ಕರಾವಳಿ ಸುದ್ದಿ: ತೆಂಗಿನ ಮರವೇರಿದ್ದ ವ್ಯಕ್ತಿ ಮರದಲ್ಲೇ ಹೃದಯಾಘತದಿಂದ ಸಾವನಪ್ಪಿದ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಲಮೊಗ್ರುವಿನ ಪನ್ನೆ ಬಳಿ ಸೋಮವಾರ ನಡೆದಿದೆ.
ಕೇರಳದ ಪಾಲಕ್ಕಾಡ್ನ ಅರುಚ್ಚಾಯ (41) ಮೃತಪಟ್ಟವರು.
ಅವರು ಕೇರಳದಿಂದ ಈ ಭಾಗಕ್ಕೆ ತೆಂಗಿನ ಮರದಿಂದ ಶೇಂದಿ ತೆಗೆಯುವ ಕೆಲಸಕ್ಕಾಗಿ ಬಂದಿದ್ದರು. ಸೋಮವಾರ ಸಂಜೆ ಕೊಲ್ಲಮೊಗ್ರು ಬಳಿಯ ಪನ್ನೆಯ ವ್ಯಕ್ತಿಯೋರ್ವರ ಜಾಗದ ತೆಂಗಿನ ಮರದಿಂದ ಶೇಂದಿ ಇಳಿಸಲು ಮರ ಹತ್ತಿದ್ದ ಅವರು ಅಲ್ಲೇ ಅಸ್ವಸ್ಥಗೊಂಡು ಬೊಬ್ಬೆ ಹಾಕಿದರೆನ್ನಲಾಗಿದೆ. ಇದನ್ನು ಕೇಳಿಸಿಕೊಂಡ ಸ್ಥಳೀಯರೋರ್ವರು ಗಮನಿಸಿ ಮರ ಹತ್ತಿದಾಗ ಅವರು ಅಸ್ವಸ್ಥರಾಗಿದ್ದರು. ಆದರೆ ಉಸಿರಾಡುತ್ತಿದ್ದರು. ತತ್ಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಲಾಗಿದ್ದು ದಳದ ಸಿಬಂದಿ ಆಗಮಿಸಿ ಅವರನ್ನು ಕೆಳಗಿಳಿಸುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ.
ಬಳಿಕ ದೇಹವನ್ನು ಕೆಳಗಿಳಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹೃದಯಾಘಾತದಿಂದ ಸಾವು ಸಂಭವಿಸಿರುವ ಬಗ್ಗೆ ಶಂಕಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.






