ತೆಂಕು-ಬಡಗುತಿಟ್ಟಿನ ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಇನ್ನಿಲ್ಲ

Views: 251
ಕನ್ನಡ ಕರಾವಳಿ ಸುದ್ದಿ: ತೆಂಕು ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ (84) ಜೂ. 21 ರಂದು ನಿಧನಹೊಂದಿದರು.
ಮೃತರು ಪತ್ನಿ ಪುತ್ರನನ್ನು ಅಗಲಿದ್ದಾರೆ.
55 ವರುಷಗಳಿಗೂ ಹೆಚ್ಚು ಯಕ್ಷಗಾನ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ವಿವಿಧ ಮೇಳಗಳಲ್ಲಿ ಅವರು ತಿರುಗಾಟ ನಡೆಸಿ ಹಾಸ್ಯ ಪಾತ್ರಗಳಿಂದ ಜನಮನ ಗೆದ್ದಿದ್ದಾರೆ.ಯಕ್ಷಗಾನ ಇಲ್ಲದ ಸಂದರ್ಭಗಳಲ್ಲಿ ಮನೆಯಲ್ಲೇ ಕುಲ ಕಸುಬಾದ ಕೈಮಗ್ಗದ ದುಡಿಮೆಯಲ್ಲಿ ಮುಖ್ಯಪ್ರಾಣರು ನಿರತರಾಗಿರುತ್ತಿದ್ದರು.
ರುಕ್ಕಯ್ಯ ಶೆಟ್ಟಿಗಾರ್ ಹಾಗೂ ಸೇಸಿ ಶೆಟ್ಟಿಗಾರ್ತಿ ದಂಪತಿಯ ಪುತ್ರನಾಗಿ 1941ರ ಮಾರ್ಚ್ 12ರಂದು ಜನಿಸಿದರು. ಶಿಮಂತೂರು ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿ ಮುಂದೆ ಯಕ್ಷಗಾನ ಕಲೆಯತ್ತ ಒಲವು ತೋರಿದ್ದರು.
ಮುಖ್ಯಪ್ರಾಣರಿಗೆ ಗುರುಗಳಾಗಿ ಛಂದೋಬ್ರಹ್ಮ ಡಾ। ನಾರಾಯಣ ಶೆಟ್ಟರು. ಮಿಜಾರು ಅಣ್ಣಪ್ಪ ಕವತ್ತಾರಿನ ಸೀತಾರಾಮ ಶೆಟ್ಟಿಗಾರ್, ಸುರತ್ಕಲ್ಲಿನ ಸೂರಪ್ಪ ಶೆಟ್ಟಿಗಾರ್, ಬ್ರಹ್ಮಾವರದ ರಾಮ ನಾಯರಿಯರಿಂದ ಪ್ರಭಾವಿತರಾಗಿದ್ದರು.
ಹವ್ಯಾಸಿ ಕಲಾವಿದ ರಾಗಿ 4 ವರ್ಷ, ಕಟೀಲು ಮೇಳದಲ್ಲಿ 4 ವರ್ಷ, ಇರಾ ಸೋಮನಾಥೇಶ್ವರ ಮೇಳದಲ್ಲಿ 2 ವರ್ಷ, ಸುಬ್ರಹ್ಮಣ್ಯ ಮೇಳದಲ್ಲಿ 1 ವರ್ಷ, ಮಂತ್ರಾಲಯ ಮೇಳದಲ್ಲಿ 1 ವರ್ಷ, ಸಾಲಿಗ್ರಾಮ ಮೇಳದಲ್ಲಿ 14 ವರ್ಷ. ಪೆರ್ಡೂರು ಮೇಳದಲ್ಲಿ 8 ವರ್ಷ, ಕುಮುಟ ಮೇಳದಲ್ಲಿ 1 ವರ್ಷ, ಕದ್ರಿ ಮೇಳದಲ್ಲಿ 3 ವರ್ಷ ಹಾಗೂ ಮಂದಾರ್ತಿ ಮೇಳದಲ್ಲಿ 16 ವರ್ಷ ಹೀಗೆ ಸುದೀರ್ಘ ತಿರುಗಾಟ ಮಾಡಿದ ಮುಖ್ಯಪ್ರಾಣ ಕಿನ್ನಿಗೋಳಿ ಆರಂಭ ಹಾಗೂ ಕೊನೆಯ ತಿರುಗಾಟ ಮಾಡಿದ್ದು ಕಟೀಲು ಮೇಳದಲ್ಲಾಗಿತ್ತು.
ಕಳೆದ ವರ್ಷದವರೆಗೂ ಕಟೀಲಿನ ನವರಾತ್ರಿ ಆಟದಲ್ಲಿ ವೇಷ ಮಾಡಿ ಸೇವೆ ಸಲ್ಲಿಸುತ್ತಿದ್ದ ಅವರು ಇತ್ತೀಚೆಗಿನವರೆಗೂ ಕಿನ್ನಿಗೋಳಿ ಪರಿಸರದ ಯಕ್ಷಗಾನ ಸಂಬಂಧಿ ಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗ ವಹಿಸುತ್ತಿದ್ದರು.
ಹಾಸ್ಯ ಪಾತ್ರಗಳು, ಕಾಲ್ಪನಿಕ ಪ್ರಸಂಗಗಳಾದ ಚೆಲುವೆ ಚಿತ್ರಾವತಿಯ ಅಡುಗೂಳಜ್ಜಿ ಮತ್ತು ಮುರಳಿ, ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರಸೇನ ಹಾಗೂ ಕಲಿಕ್ರೋಧನದ ಮಡಿವಾಳ, ನಾಗಶ್ರೀಯ ಕೈರವನ ಮುಂತಾದ ಪಾತ್ರಗಳ ಮೂಲಕ ಮುಖ್ಯಪ್ರಾಣರು ಅಪಾರ ಜನ ಮೆಚ್ಚುಗೆ ಗಳಿಸಿದ್ದರು.
ಯಕ್ಷಗಾನ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಕಲಾರಂಗದ ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿಯ ಪುರಸ್ಕಾರ, ಕೋಡಿಮನೆ ವಾಸುಭಟ್ಟ ಪುರಸ್ಕಾರ ಸಹಿತ ನೂರಾರು ಸಮ್ಮಾನ, ಗೌರವಗಳು ಮುಖ್ಯಪ್ರಾಣ ಅವರಿಗೆ ಸಂದಿವೆ.
ಭಾನುವಾರ ಬೆಳಗ್ಗೆ 10ರಿಂದ 12 ಗಂಟೆ ವರೆಗೆ ಕಿನ್ನಿಗೋಳಿಯ ಶಿಮಂತೂರು ಉದಯಗಿರಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ದ ಮೂಲಗಳಿಂದ ತಿಳಿದುಬಂದಿದೆ.