ಶಿಕ್ಷಣ

ಕುಂದಾಪುರ ವಿದ್ಯಾರಣ್ಯ ಶಾಲೆಯಲ್ಲಿ ಲಯನ್ಸ್ ಕ್ವೆಸ್ಟ್‌ ಶಿಕ್ಷಕರ ತರಬೇತಿ ಕಾರ್ಯಾಗಾರ 

ಆಧುನಿಕ ತಂತ್ರಜ್ಞಾನ ಹಾಗೂ ಭಾವನಾತ್ಮಕ ಜಾಗೃತಿಯ ಅಗತ್ಯ: ಡಾ. ರಮೇಶ್ ಶೆಟ್ಟಿ

Views: 4

ಕನ್ನಡ ಕರಾವಳಿ ಸುದ್ದಿ: “ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಮುಂದುವರಿದಿದ್ದಾರೆ.ಮಕ್ಕಳ ಈ ಬುದ್ಧಿಮತ್ತೆಗೆ ತಕ್ಕ ಹಾಗೆ ಶಿಕ್ಷಕರು ಕೂಡ ತಮ್ಮ ಬೋಧನಾ ಶೈಲಿಯನ್ನು ಹಾಗೂ ಆಲೋಚನೆಗಳನ್ನು ನಿರಂತರವಾಗಿ ಪರಿಷ್ಕರಿಸಿಕೊಳ್ಳಬೇಕು” ಎಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅಭಿಪ್ರಾಯಪಟ್ಟರು.

ವಿದ್ಯಾರಣ್ಯ ಶಾಲೆಯಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಲಯನ್ಸ್ ಕ್ಲಬ್ ತಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಲಯನ್ಸ್ ಕ್ವೆಸ್ಟ್ ಟೀಚರ್ ಟ್ರೈನಿಂಗ್ ಕಾರ್ಯಾಗಾರ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಲಯನ್ಸ್ ಸಂಸ್ಥೆಯು ಹಮ್ಮಿಕೊಳ್ಳುವ ಇಂತಹ ತರಬೇತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಅತ್ಯಂತ ಸಹಾಯಕವಾಗಿವೆ. ಇಂದಿನ ಮಕ್ಕಳು ವಿಜ್ಞಾನ, ತಂತ್ರಜ್ಞಾನ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಮುಂದುವರಿದಿದ್ದಾರೆ ಹಾಗಾಗಿ ಮಕ್ಕಳಿಗೆ ತಕ್ಕ ಹಾಗೇ ಶಿಕ್ಷಕರು ಕೂಡ ತಮ್ಮ ಬೋಧನಾ ಶೈಲಿಯನ್ನು ಹಾಗೂ ಆಲೋಚನೆಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಉತ್ತಮ ಶಿಕ್ಷಕರಾಗಲು ಮತ್ತು ಅವರ ಮಾರ್ಗದರ್ಶಕರಾಗಲು ಸಾಧ್ಯವಿದೆ” ಎಂದು ಅವರು ಅಭಿಪ್ರಾಯಪಟ್ಟರು. ಶಿಕ್ಷಕರು ಈ ತರಬೇತಿಯ ಪ್ರತಿಯೊಂದು ಸದುಪಯೋಗವನ್ನು ಪಡೆದುಕೊಂಡು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಡಿಸ್ಟ್ರಿಕ್ಟ್ 317 Cಯ ಗವರ್ನರ್ ಲಯನ್ ಎಂಜೆಎಫ್ ರಾಜೀವ ಕೋಟ್ಯಾನ್ ಮಾತನಾಡಿ, ಶಿಕ್ಷಕರು ಮಕ್ಕಳ ಭವಿಷ್ಯ ನಿರ್ಮಾಣದ ರೂವಾರಿಗಳು. ಹದಿಹರೆಯದ ಮಕ್ಕಳ ಮನಸ್ಸನ್ನು ಅರಿತುಕೊಂಡು ಉತ್ತಮ ಪ್ರಜೆಗಳನ್ನಾಗಿ ತಿದ್ದಿ ತೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಪಿಎಂಜೆಎಫ್ ಹರಿಪ್ರಸಾದ್ ರೈ ಮಾತನಾಡಿ, ಹದಿಹರೆಯದ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಈ ತರಬೇತಿಯ ಮುಖ್ಯ ಉದ್ದೇಶ ಎಂದರು.

ಸೆಕೆಂಡ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಪಿಎಂಜೆಎಫ್ ಇಂಜಿನಿಯರ್ ರಮಾನಂದ ಅವರು ಮಾತನಾಡಿ, ಪ್ರಸ್ತುತ ಮಕ್ಕಳಲ್ಲಿ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಕೃತಕ ಬುದ್ಧಿಮತ್ತೆ) ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ‘ಎಮೋಷನಲ್ ಇಂಟೆಲಿಜೆನ್ಸ್‌’ (ಭಾವನಾತ್ಮಕ ಬುದ್ಧಿಮತ್ತೆ) ಕೊರತೆ ಕಾಣಿಸಿಕೊಳ್ಳುತ್ತಿದೆ. ಪೋಷಕರು ಮತ್ತು ಗುರು-ಹಿರಿಯರ ಜೊತೆ ವಿದ್ಯಾರ್ಥಿಗಳು ಹೇಗೆ ಸಾಮರಸ್ಯದಿಂದಿರಬೇಕು ಎಂಬುದನ್ನು ಈ ತರಬೇತಿ ಮೂಲಕ ತಿಳಿಸಿಕೊಡಲಾಗುವುದು ಎಂದರು.

ವೇದಿಕೆಯಲ್ಲಿ ತಲ್ಲೂರಿನ ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ್ ಶೆಟ್ಟಿ, ಕುಂದಾಪುರ ಲಯನ್ಸ್ ಕ್ಲಬ್ ಸೆಕ್ರೆಟರಿ ದಿನಕರ್ ಶೆಟ್ಟಿ, ಲಯನ್ಸ್ ಕ್ವೆಸ್ಟ್ ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ ಡಾ.ಕಿಶೋರ್ ಕುಮಾರ್ ಶೆಟ್ಟಿ, ಡಿಸ್ಟ್ರಿಕ್ಟ್‌ GAT Consultant ಅರುಣ್ ಕುಮಾರ್ ಹೆಗ್ಡೆ, ಲಯನ್ ಎಂಜೆಎಫ್‌ ನ ರಿಜನ್‌ ಚೇರ್‌ ಪರ್ಸನ್‌ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕುಮಾರ್‌ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲರಾದ ಅನಿತಾ ಕುಮಾರಿ, ಉಪಪ್ರಾಂಶುಪಾಲರಾದ ಸ್ಪೂರ್ತಿ ಎ ಉಪಸ್ಥಿತರಿದ್ದರು.

Related Articles

Back to top button
error: Content is protected !!