ಇತರೆ

ಉಡುಪಿ: ಗಡಿಪಾರು ಆರೋಪಿ ಬಂಧನ 

Views: 79

ಕನ್ನಡ ಕರಾವಳಿ ಸುದ್ದಿ: ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಹೊರ ಜಿಲ್ಲೆಗೆ ಗಡಿಪಾರು ಆದೇಶ ಪಡೆದು, ಆದೇಶದ ಪ್ರತಿ ಜಾರಿ ಮಾಡಲು ಬಂದ ಪೊಲೀಸರನ್ನು ಯಾಮಾರಿಸಿ ಓಡಿ ಹೋಗಿದ್ದ ಫೈಝಲ್ ಎಂಬ ಆರೋಪಿಯನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹೊರ ಜಿಲ್ಲೆಗೆ ಗಡಿಪಾರು ಆದೇಶವನ್ನು ಜಾರಿ ಮಾಡಲು ಹೋದ ವೇಳೆ ಆರೋಪಿ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿರು ವುದನ್ನು ಖಚಿತಪಡಿಸಿಕೊಂಡು ಮಲ್ಪೆ ಪೊಲೀಸರು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಹೋದಾಗ, ಆರೋಪಿ ತಾನು ಕುಳಿತಿದ್ದ ಕಾರನ್ನು ಒಮ್ಮೆಗೆ ಹಿಮ್ಮುಖವಾಗಿ ಚಲಾಯಿಸಿ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಓಡಿ ಹೋಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯಿಂದ ಕಾರು ಜಖಂಗೊಂಡಿದ್ದು, ಆತನ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಆತ ಬಿಟ್ಟು ಹೋದ ಕಾರಿನ ಮಹಜರು ಪ್ರಕ್ರಿಯೆ ನಡೆಸುವಾಗ ಅದರಲ್ಲಿ ಮಾದಕ ವಸ್ತು ಗಾಂಜಾ 173.42 ಗ್ರಾಮ್ (ಮೌಲ್ಯ ಅಂದಾಜು 8,000ರೂ) ಪತ್ತೆಯಾಗಿತ್ತು. ಇದರೊಂದಿಗೆ ದೊರೆತ ಎರಡು ಮೊಬೈಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಆರೋಪಿ ಫೈಝಲ್ ಮತ್ತೊಬ್ಬ ಆರೋಪಿಯೊಂದಿಗೆ ಸೇರಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟು ಕೊಂಡು ಮಾರಾಟ ಮಾಡಲು ಕಾಯುತ್ತಿದ್ದುದಾಗಿ ತಿಳಿದುಬಂದಿತ್ತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಮೇಲಿನ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾರ್ಕಳದ ಬಂಗ್ಲಗುಡ್ಡೆ ಕಸಬ ನಿವಾಸಿ ಫೈಝಲ್‌ನ್ನು ಕಾರ್ಕಳ ಪೊಲೀಸ್‌ ಉಪನಿರೀಕ್ಷಕರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

Related Articles

Back to top button
error: Content is protected !!