ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಮಗನಿಗಾಗಿ ಪ್ರವಾಸ: ಉಗ್ರರ ಗುಂಡಿಗೆ ತಂದೆ ಬಲಿ

Views: 155
ಕನ್ನಡ ಕರಾವಳಿ ಸುದ್ದಿ: ಕಾಶ್ಮೀರಕ್ಕೆ ಕುಟುಂಬಸಮೇತ ಪ್ರವಾಸಕ್ಕೆ ಹೋಗಿದ್ದ ಉದ್ಯಮಿ ಮಂಜುನಾಥ್ರಾವ್ ಅವರು ಕಾಶ್ಮೀರದ ಪೆಹಲ್ಗಾಂವ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಏಪ್ರಿಲ್ 19ರಂದು ಅವರು ಪತ್ನಿ ಪಲ್ಲವಿ ಮತ್ತು ಪುತ್ರನ ಜೊತೆಗೆ ಪ್ರವಾಸ ಕೈಗೊಂಡಿದ್ದರು.
ಮಂಜುನಾಥ್ರಾವ್ ಅವರು ಉಗ್ರರ ಗುಂಡೇಟಿನಿಂದ ಸಾವನ್ನಪ್ಪಿರುವುದನ್ನು ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ. ಮಂಜುನಾಥ್ರಾವ್ ಅವರು ಶಿವಮೊಗ್ಗದ ವಿಜಯನಗರದ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ. ಇವರ ಪತ್ನಿ ಪಲ್ಲವಿ ಚಿಕ್ಕಮಗಳೂರು ಜಿಲ್ಲೆಯ ಬಿರೂರಿನ ಮ್ಯಾಮ್ಕೋಸ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಗನಿಗಾಗಿ ಕಾಶ್ಮೀರ ಪ್ರವಾಸ: ಪುತ್ರ ಅಭಿಜಯ ಅವರು ಇತ್ತೀಚೆಗೆ ಪ್ರಕಟವಾದ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇಕಡಾ 97ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದರು. ಪುತ್ರನ ಸಾಧನೆಯನ್ನು ಸಂಭ್ರಮಿಸಲು ಅವರು ಕಾಶ್ಮೀರ ಪ್ರವಾಸದ ಯೋಜನೆ ಹಾಕಿದ್ದರು.
ಕುಟುಂಬವು ಕಾಶ್ಮೀರದ ಪೆಹಲ್ಗಾಂವ್ನ ಮಾರುಕಟ್ಟೆಗೆ ಹೋದಾಗ ಉಗ್ರನು ಮಂಜುನಾಥ್ ಅವರ ಹೆಸರು ಕೇಳಿದ್ದಾನೆ. ಬಳಿಕ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಜೊತೆಗೆ, ಪತ್ನಿ ಪಲ್ಲವಿ ಹಾಗೂ ಮಗ ಅಭಿಜಯ ಇದ್ದರು. ಇಬ್ಬರನ್ನು ಬಿಟ್ಟು ಆತ ಉದ್ಯಮಿ ಮೇಲೆ ಮಾತ್ರ ಗುಂಡಿನ ದಾಳಿ ಮಾಡಿದ್ದಾಗಿ ತಿಳಿದುಬಂದಿದೆ.