ಕರಾವಳಿ

ಉಡುಪಿ ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಕೋಟೇಶ್ವರ ಯುವಕನಿಗೆ 70 ಲಕ್ಷ ರೂ.ಪಂಗನಾಮ!

Views: 269

ಉಡುಪಿ: ಉಡುಪಿ ನ್ಯಾಯಾಲಯಗಳಲ್ಲಿ ಡಿ ದರ್ಜೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ 70.25 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.

ಆರೋಪಿ ದಯಾನಂದ ಎಂಬುವರು ಕೋಟೇಶ್ವರ ಗ್ರಾಮದ ದೀಪಕ್ ಎಂಬುವರಿಗೆ ಉಡುಪಿ ನ್ಯಾಯಾಲಯಗಳಲ್ಲಿ ಡಿ ದರ್ಜೆ ಹುದ್ದೆ ಕೊಡಿಸುವುದಾಗಿ ನಂಬಿಸಿ 2022ರಲ್ಲಿ 6.5 ಲಕ್ಷ ರೂ. ನಗದು ಪಡೆದುಕೊಂಡಿದ್ದರು. ಬಳಿಕ 3 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಸುಶೀಲಾ ಎಂಬುವವರು 5.5 ಲಕ್ಷ ರೂ, ರತ್ನಾಕರ ಎಂಬುವವರು ರೂಪಾಯಿ 14 ಲಕ್ಷ ರೂ, ದಿನೇಶ ಎಂಬುವವರು 16 ಲಕ್ಷ ರೂ, ಪದ್ಮನಾಭ ಎಂಬುವವರು 7.25 ಲಕ್ಷ ರೂ, ವಿಘ್ನೇಶ ಎಂಬುವರು 2 ಲಕ್ಷ ರೂ, ಸುದೀಪ ಎಂಬುವರು 7 ಲಕ್ಷ ರೂ, ಮಂಜುನಾಥ ಎಂಬುವರು 3 ಲಕ್ಷ ರೂ, ಅಭಿಷೇಕ ಎಂಬುವರು 2 ಲಕ್ಷ ರೂ, ಸೌರಭ್ ಹಾಗೂ ಸ್ವಸ್ತಿಕ್ ಎಂಬುವರು ತಲಾ 2 ಲಕ್ಷ ರೂ. ಕೊಟ್ಟಿದ್ದರು.

2023 ಆಗಸ್ಟ್ 20ರಂದು ದೀಪಕ್ ಅವರಿಗೆ ಕೆಲಸಕ್ಕೆ ನೇಮಕಾತಿಯ ನೋಟಿಫಿಕೇಶನ್ ಹಾಗೂ ಲಿಸ್ಟ್ ಆಫ್ ಕ್ಯಾಂಡಿಡೇಟ್ ಸೆಲೆಕ್ಟೆಡ್ ಎಂಬ 2 ಜೆರಾಕ್ಸ್ ಪ್ರತಿ ನೀಡಿದ್ದು, ದೀಪಕ್ ಆನ್‌ಲೈನ್‌ನಲ್ಲಿ ಬಂದ ನೇಮಕಾತಿಯ ನೈಜ ಲಿಸ್ಟ್ ನೋಡಿ ಅದರಲ್ಲಿ ತಮ್ಮ ಹೆಸರಿಲ್ಲದ ಕಾರಣ ದಯಾನಂದ ಅವರಲ್ಲಿ ವಿಚಾರಿಸಿದಾಗ ಹೈಕೋರ್ಟ್‌ನಿಂದ ಬೇರೆಯೇ ಲಿಸ್ಟ್ ಬರುವುದಾಗಿ ದೀಪಕ್ ಅವರನ್ನು ನಂಬಿಸಲಾಗಿತ್ತು. ನಂತರ ಅಪಾಯಿಂಟ್‌ಮೆಂಟ್ ಕ್ಯಾಂಡಿಡೇಟ್ ಪ್ಲೇಸ್‌ಮೆಂಟ್ ಲಿಸ್ಟ್ ಎಂಬ ಜೆರಾಕ್ಸ್ ಪ್ರತಿ ನೀಡಿದ್ದು ವಿಚಾರಿಸಿದಾಗ ನೇರವಾಗಿ ಹೈಕೋರ್ಟ್‌ನಿಂದ ಪಡೆದುಕೊಂಡಿದ್ದು, ಆ ದಿನಾಂಕದಂದು ಉಡುಪಿ ಕೋರ್ಟ್‌ಗೆ ಹೋಗಿ ದಾಖಲೆ ಹಾಜರುಪಡಿಸಬೇಕೆಂದು ದಯಾನಂದ ತಿಳಿಸಿದ್ದರು.

ವಂಚನೆ ಬಗ್ಗೆ ತಿಳಿದು ಹಣ ವಾಪಾಸು ಕೇಳಿದಾಗ ದಯಾನಂದ ತನ್ನ ಹೆಂಡತಿ ಭವಾನಿ ಹೆಸರಿನ ಜಾಗವನ್ನು ಜಿಪಿಎ ಮಾಡಿ ದೀಪಕ್ ಹಾಗೂ ರತ್ನಾಕರ ಅವರಿಗೆ ನೀಡಿದ್ದರು. ದೀಪಕ್ ಅವರಿಗೆ 6.5 ಲಕ್ಷ ರೂ.ಗಳ ಚೆಕ್ ನೀಡಿದ್ದರು. ಆದರೆ ಜಾಗ ವರ್ಗಾಯಿಸದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!