“NRI ಪ್ರೊಟೆಕ್ಷನ್ ಬಿಲ್” ಜಾರಿಗೆ ಭಾರತೀಯ ರಾಯಭಾರಿ ಕಛೇರಿಯ ಮೂಲಕ ಮನವಿ
ವಂಚಕರ ವಿರುದ್ದ ಹೋರಾಡಲು ಜಾಗತಿಕವಾಗಿ ಎಲ್ಲಾ ಅನಿವಾಸಿಗರು ಈಗ ಒಟ್ಟಾಗಿ NRI grievances Forum ಅನ್ನು ರಚಿಸಿಕೊಂಡಿದ್ದಾರೆ, ವಂಚಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮತ್ತು ಕಾನೂನನ್ನು ರೂಪಿಸಿ "NRI ಪ್ರೊಟೆಕ್ಷನ್ ಬಿಲ್" ಅನ್ನು ಜಾರಿಗೊಳಿಸಲು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ, ಅಮೇರಿಕಾ, ಲಂಡನ್, ಸಿಂಗಪುರ, ಒಮಾನ್, ದುಬೈ, ಹಾಂಗ್ ಕಾಂಗ್, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿನ ಭಾರತೀಯ ರಾಯಭಾರಿ ಕಛೇರಿಯ ಮೂಲಕ ಮನವಿ ಸಲ್ಲಿಸಿದ್ದಾರೆ.

Views: 303
ಬರಹ:- ಪಿ.ಎಸ್.ರಂಗನಾಥ, ಮಸ್ಕತ್ – ಒಮಾನ್
ಉದ್ಯೋಗ, ವ್ಯವಹಾರ, ಸೇವೆ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಬೇರೆ ದೇಶಕ್ಕೆ ಆರು ತಿಂಗಳು ಅಥವಾ ಹೆಚ್ಚು ವಲಸೆ ಹೋಗಿರುವ ಒಬ್ಬ ಭಾರತೀಯ ನಾಗರಿಕನನ್ನು ಅನಿವಾಸಿ ಭಾರತೀಯ ಎಂದು ಕರೆಯುತ್ತಾರೆ. ತಮ್ಮ ಮತ್ತು ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ, ಉತ್ತಮ ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋದ ಲಕ್ಷಾಂತರ ಭಾರತೀಯರು ವಿವಿಧ ದೇಶಗಳಲ್ಲಿ ನೆಲಸಿ, ಅಲ್ಲಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವಂತಹ ವಿಷಯ.
ಅನಿವಾಸಿಗರು ವಿದೇಶದಲ್ಲಿ ಹಣ, ಅಂತಸ್ತು ಗಳಿಸುವುದರ ಜತೆ ಕೆಲ ವೈಯುಕ್ತಿಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ, ಒಮ್ಮೊಮ್ಮೆ ತ್ಯಾಗ ಮಾಡಬೇಕಾಗುವ ಸಂದರ್ಭವೂ ಒದಗಿ ಬರುತ್ತದೆ. ಇಚ್ಚಿಸಿದಾಗ ಊರಿಗೆ ಬಂದು ಹೋಗಲು ಸಾಧ್ಯವಿಲ್ಲ. ಮದುವೆ, ಮುಂಜಿ, ನಾಮಕರಣ ಅಥವ ಯಾರಾದರು ತೀರಿಹೋದರು ಸಹ ಕೆಲವೊಮ್ಮೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ತಾಯ್ನಾಡು, ಬಂಧುಬಳಗ, ಸ್ನೇಹಿತರು, ಆತ್ಮೀಯರು ನೆನಪಾದೊಡನೆ ಊರಿಗೆ ಭೇಟಿ ನೀಡಲಾಗುವುದಿಲ್ಲ. ಪ್ರತಿ ಬಾರಿ ಊರಿಗೆ ಬಂದು ಹೋಗಲು ಲಕ್ಷಾಂತರ ರೂಪಾಯಿ ಹಣ ವಿನಿಯೋಗಿಸಬೇಕಾಗುತ್ತದೆ. ವಾರ್ಷಿಕ ರಜೆಗೆಂದು ಬಂದಾಗ, ಆ ಸೀಮಿತ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಲಾ ಕೆಲಸ ಕಾರ್ಯಗಳನ್ನ ಮುಗಿಸಿಕೊಂಡು ಮರಳಿ ವಿದೇಶಕ್ಕೆ ಹೋಗುವುದು ಸಾಮಾನ್ಯ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಹಾಗೆ, ಅನಿವಾಸಿಗಳ ಬದುಕು ಹೊರಗಿನವರಿಗೆ ಸುಂದರವಾಗಿ ಕಾಣಬಹುದು, ಆ ಬದುಕಿನಲ್ಲಿಯೂ ಹಲವು ವಿಧದ ಕಷ್ಟ ನಷ್ಟಗಳಿವೆ.
ನಿವೃತ್ತಿ ಕಾಲದಲ್ಲಿ ಸ್ವಂತದ್ದೊಂದು ಸೂರಿರಲಿ ಎಂದು ಊರಿನಲ್ಲಿ ಸ್ವಂತದ್ದೊಂದು ಮನೆ ಕಟ್ಟಿಸಿಕೊಳ್ಳುತ್ತಾರೆ, ಸೈಟ್ ಭೂಮಿ ಖರೀದಿಸುತ್ತಾರೆ. ಕೆಲಸಮಯದ ನಂತರ ಈ ಖರೀದಿಸಿದ ಸ್ವತ್ತು ಬೇರೆಯವರ ಪಾಲಾಗಿದ್ದರೆ ಏನು ಮಾಡಬೇಕು? ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿ ಖರೀದಿಸಿದ, ಸೈಟ್, ಮನೆ, ಜಮೀನು ಇತ್ಯಾದಿ ಆಸ್ತಿಯನ್ನು ನಕಲಿ ದಾಖಲೆ ತಯಾರಿಸಿ ಬೇರೊಬ್ಬರಿಗೆ ಮಾರಾಟ ಮಾಡಿರುತ್ತಾರೆ. ಕೆಲ ಬಿಲ್ಡರ್ ಗಳು, ಕಾಂಟ್ರಾಕ್ಟರ್ ಗಳು ವಿದೇಶಗಳಿಗೆ ಬಂದು ಅಲ್ಲಿನ ನೂರಾರು ಅನಿವಾಸಿಗರನ್ನ ತಮ್ಮ ಬಣ್ಣದ ಮಾತಿನಿಂದ ಮರಳು ಮಾಡಿ ಅಡ್ವಾನ್ಸ್ ಪಡೆದು ಮಾಯವಾಗುತ್ತಾರೆ. ಅದೇ ರೀತಿ ಕೆಲ ಶಿಕ್ಷಣ ಸಂಸ್ಥೆಗಳ ಏಜೆಂಟ್ ಗಳೆಂದುಕೊಂಡು ಬರುವವರು ನಿಮ್ಮ ಮಕ್ಕಳಿಗೆ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನೀಯರಿಂಗ್ ಸೀಟ್ ಕೊಡಿಸುತ್ತೇವೆ, ಮೆಡಿಕಲ್ ಸೀಟ್ ಕೊಡಿಸುತ್ತೇವೆ ಎಂದು ಲಕ್ಷಾಂತರ ರೂಪಾಯಿಗಳನ್ನ ವಸೂಲಿ ಮಾಡಿ ವಂಚಿಸುವವರು ಇದ್ದಾರೆ. ಕೆಲ ಕಾಂಟ್ರಾಕ್ಟರ್ ಬಿಲ್ಡರ್ ಗಳು ಮನೆ ಕಟ್ಟಿ ಕೊಡುತ್ತೇನೆಂದು ಹಣ ಪಡೆದು, ಫೋನಿಗೆ ಸಿಗುವುದಿಲ್ಲ. ಏಜೆಂಟ್ ಗಳು, ಸುಸಜ್ಜಿತ ನಿವೇಶನ ಕೊಡಿಸುತ್ತೇವೆ ಎಂದು ಮಾತಿನಲ್ಲಿ ಮರಳು ಮಾಡಿ ಹಣ ಪಡೆದು ವಂಚಿಸುತ್ತಾರೆ. ಬ್ಯಾಂಕಿನಲ್ಲಿದ್ದ ಫಿಕ್ಸ್ಡ್ ಡಿಪಾಸಿಟ್ ಅನ್ನು ನಕಲಿ ದಾಖಲೆ ತಯಾರಿಸಿ ಹಣವನ್ನು ವಿತ್ ಡ್ರಾಯಾಲ್ ಮಾಡಿದವರು ಇದ್ದಾರೆ. ಮನೆಯಲ್ಲಿ ಯಾರೂ ಇಲ್ಲವೆಂದು ಗಮನಿಸಿ, ಮನೆಗೆ ನುಗ್ಗಿ ಕಳ್ಳತನ ಮಾಡುವವರು ಕಮ್ಮಿ ಇಲ್ಲ. ಆದಾಯ ತೆರಿಗೆ ಇಲಾಖೆ ವೆಬ್ಸೈಟ್ ಮೂಲಕವೇ ಅನಿವಾಸಿ ಭಾರತೀಯರ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಅವರ ಖಾತೆಗಳಲ್ಲಿನ ಹಣ ದೋಚಿದ ಘಟನೆಗಳು ವರದಿಯಾಗಿವೆ. ಅನಿವಾಸಿಗರನ್ನೇ ಗುರಿಯಾಗಿಸಿಕೊಂಡು ವಂಚಿಸುವವರೇನು ಕಮ್ಮಿಯಿಲ್ಲ,
ಇಂತಹ ಸಾವಿರಾರು ಪ್ರಕರಣಗಳು ಪೋಲೀಸ್ ಠಾಣೆಯಲ್ಲಿವೆ. ನ್ಯಾಯಕ್ಕಾಗಿ ಬಹಳಷ್ಟು ಜನ ಅನಿವಾಸಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೆಲ ಅಸಹಾಯಕ ಅನಿವಾಸಿಗರು, ಈ ಕೋರ್ಟ್, ಕಾನೂನು ಗೊಡವೆ ಬೇಡವೆಂದುಕೊಂಡು ಮಾತುಕತೆಯಲ್ಲಿಯೇ ಬಗೆಹರಿಸಿಕೊಂಡು ಲಕ್ಷಾಂತರ ರೂಪಾಯಿಗಳನ್ನು ನಷ್ಟ ಮಾಡಿಕೊಂಡವರಿದ್ದಾರೆ. ಕೆಲವರು ಲಾಯರ್, ಕಾನೂನು, ಕೋರ್ಟ್ ಎಂದು ಹಣ ಮತ್ತು ಸಮಯವನ್ನು ವಿನಿಯೋಗಿಸುತ್ತಿದ್ದಾರೆ.
ವರ್ಷಗಳ ಕಾಲ ನೆಲೆ ನಿಂತು ತಮ್ಮ ಭವಿಷ್ಯದ ಭದ್ರ ಬುನಾದಿಗಾಗಿ, ಕಷ್ಟ ಪಟ್ಟು ಹಣ ಸಂಪಾದಿಸುವ ಅನಿವಾಸಿ ಭಾರತೀಯರನ್ನು ಗುರಿಯಾಗಿಸಿಕೊಂಡು ಕೆಲವರು ವಂಚಿಸುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಇಂತಹ ವಂಚಕರು ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಅದರ ಗಾಳದಿಂದ ತಪ್ಪಿಸಿಕೊಂಡು ಹೊಸ ಬಲಿಪಶುಗಳನ್ನ ಹುಡುಕಿ ಬಲಿಕೊಡಲು ನಿರಂತರ ಪ್ರಯತ್ನ ನಡೆಸಿ ಸಫಲರು ಆಗುತ್ತಿರುತ್ತಾರೆ. ವಂಚನೆಗೊಳಗಾದವರು ಕಣ್ಣೀರು ಹಾಕುವುದೊಂದೆ ಕೆಲಸ.
ಇಂತಹ ವಂಚಕರ ವಿರುದ್ದ ಹೋರಾಡಲು ಜಾಗತಿಕವಾಗಿ ಎಲ್ಲಾ ಅನಿವಾಸಿಗರು ಈಗ ಒಟ್ಟಾಗಿ NRI grievances Forum ಅನ್ನು ರಚಿಸಿಕೊಂಡಿದ್ದಾರೆ, ವಂಚಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮತ್ತು ಕಾನೂನನ್ನು ರೂಪಿಸಿ “NRI ಪ್ರೊಟೆಕ್ಷನ್ ಬಿಲ್” ಅನ್ನು ಜಾರಿಗೊಳಿಸಲು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ, ಅಮೇರಿಕಾ, ಲಂಡನ್, ಸಿಂಗಪುರ, ಒಮಾನ್, ದುಬೈ, ಹಾಂಗ್ ಕಾಂಗ್, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿನ ಭಾರತೀಯ ರಾಯಭಾರಿ ಕಛೇರಿಯ ಮೂಲಕ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ಆಸ್ತಿ ವಿವಾದಗಳಿಗೆ ಕಾನೂನು ರಕ್ಷಣೆ:
1.1. ಚರ ಮತ್ತು ಸ್ಥಿರಾಸ್ತಿಗಳ ವಿವಾದಗಳಿಗೆ ಸ್ನೇಹಿತರು ಮತ್ತು ಸಂಬಂಧಿಕರನ್ನೊಳಗೊಂಡು ಪರಿಹಾರ ಸೂಚಿಸುವಿಕೆ.
1.2. ಕುಟುಂಬದ ಸ್ವಾಧೀನದಲ್ಲಿರುವ ಆಸ್ತಿಗಳ ಸುರಕ್ಷತೆ ಮತ್ತು ಭದ್ರತೆಯತ್ತ ಗಮನ.
1.3. ಆಸ್ತಿಗಳ ವಿವಾದ, ಸ್ಥಿರಾಸ್ತಿ, ಸ್ವಾಧೀನ ಹಸ್ತಾಂತರಿಸದಿರುವುದು, ಬಿಲ್ಡರ್ಗಳು ಮತ್ತು ಸರ್ಕಾರಿ ಅಧಿಕಾರಿಗಳಿಂದ ವಂಚನೆ.
1.4 ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿತ ವಂಚನೆ, ಇತ್ಯಾದಿ.
2. NRI ತನಿಖಾ ಸಂಸ್ಥೆ ನಿಬಂಧನೆಗಳು:
2.1. ಆನ್ಲೈನ್ ಮುಖಾಂತರ ಎಫ್ಐಆರ್ ದಾಖಲಿಸಲು ಅನುಕೂಲ ಮಾಡಿಕೊಡುವುದರ ಬಗ್ಗೆ.
2.2 ಆನ್ಲೈನ್ ವಿಚಾರಣೆ ಮತ್ತು ದಾಖಲಾತಿ (ಉದಾ., ಪಂಚನಾಮೆ).
2.3 ತನಿಖಾ ಅವಧಿಯ ಮಿತಿ ಗರಿಷ್ಠ 90 ದಿನಗಳಿಗೆ.
2.4 ಎನ್ಆರ್ಐ ಕೋರ್ಟ್ಗೆ 90 ದಿನಗಳೊಳಗೆ ನಿರ್ಣಯವನ್ನು ಒದಗಿಸಲು ಆದೇಶ.
3. ಆರೋಪಿಗಳಿಗೆ ಜಾಮೀನು ರಹಿತ ವಾರಂಟ್ಗಳು.
4. ಅನಿವಾಸಿ ಭಾರತೀಯರ ರಕ್ಷಣೆ,
ನಯವಂಚಕರನ್ನು ಕಾನೂನಿನ ಕುಣಿಕೆಗೆ ಸುಲಭವಾಗಿ ತಳ್ಳಲು, ಈ ಎಲ್ಲಾ ಅಂಶಗಳು ಜಾರಿಗೆ ಬರುವ ಅವಶ್ಯಕತೆ ಇದೆ. ಕಷ್ಟಪಟ್ಟು ಬೆವರು ಸುರಿಸಿ ಗಳಿಸಿದ ಆಸ್ತಿ, ಹಣ ಪರರ ಪಾಲಾಗಬಾರದು, ಪ್ರಧಾನಮಂತ್ರಿಗಳು ಈ ಸಮಸ್ಯೆಗಳ ಕುರಿತು ಯೋಚಿಸಿ ಸೂಕ್ತ ಕಾನೂನು ತರುವ ಅವಶ್ಯಕತೆ ಇದೆ.