ಆರೋಗ್ಯಜನಮನ

300 ಕೋಟಿ ಲಂಚದ ಆಫರ್ ಇಟ್ಟಿದ್ದ  ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ನಿವಾಸದ ಮೇಲೆ ಸಿಬಿಐ ದಾಳಿ

Views: 66

ಕಿರು ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದ ತನಿಖೆಯ ಭಾಗವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿವಾಸ ಸೇರಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. 100 ಅಧಿಕಾರಿಗಳನ್ನೊಳಗೊಂಡ ತಂಡವು ಗುರುವಾರ ಬೆಳಗ್ಗೆ ವಿವಿಧ ನಗರಗಳಲ್ಲಿನ 30 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಆಗಸ್ಟ್ 23, 2018ರಿಂದ ಅಕ್ಟೋಬರ್ 30, 2019ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಮಲಿಕ್ ಅವರು ಕಿರು ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಎರಡು ಕಡತಗಳನ್ನು ತೆರವುಗೊಳಿಸಲು 300 ಕೋಟಿ ರೂಪಾಯಿ ಲಂಚದ ಆಫರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಏನಿದು ಪ್ರಕರಣ?

2019ರಲ್ಲಿ ಖಾಸಗಿ ಕಂಪನಿಯೊಂದಕ್ಕೆ ಕಿರು ಜಲವಿದ್ಯುತ್ ಯೋಜನೆ (ಎಚ್‌ಇಪಿ)ಗಾಗಿ ಸುಮಾರು 2,200 ಕೋಟಿ ಮೌಲ್ಯದ ಸಿವಿಲ್ ಕಾಮಗಾರಿಯ ಗುತ್ತಿಗೆಯನ್ನು ನೀಡುವಲ್ಲಿ ಅವ್ಯವಹಾರದ ಆರೋಪಗಳಿಗೆ ಈ ತನಿಖೆ ಸಂಬಂಧಿಸಿದೆ. ಏಪ್ರಿಲ್ 20, 2022ರಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮನವಿ ಮೇರೆಗೆ ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ. ಅಂದಿನ ಕಿರು ಜಲವಿದ್ಯುತ್ ಯೋಜನೆಯ ಚಯರ್‌ ಮ್ಯಾನ್‌, ಎಂಡಿ, ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್‌ನ (ಸಿವಿಪಿಪಿಪಿಎಲ್) ಇಬ್ಬರು ನಿರ್ದೇಶಕರು, ಖಾಸಗಿ ಕಂಪನಿ ಮತ್ತು ಇತರ ಅಪರಿಚಿತರ ವಿರುದ್ಧ ಅವ್ಯವಹಾರದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.ಕಿ

ರು ಜಲವಿದ್ಯುತ್ ಯೋಜನೆಯ ಸಿವಿಲ್ ಕಾಮಗಾರಿಗೆ ಪ್ಯಾಕೇಜ್‌ನ್ನು ಇ-ಟೆಂಡರ್ ಮಾಡುವ ಮಾರ್ಗಸೂಚಿಗಳನ್ನು ಅನುಸರಿಸದೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಸಿವಿಪಿಪಿಪಿಎಲ್ (ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ (ಪಿ) ಲಿಮಿಟೆಡ್) ಮಂಡಳಿಯ ಸಭೆಯಲ್ಲಿ ಮತ್ತೆ ಹರಾಜಿನ ಮೂಲಕ ಇ-ಟೆಂಡರ್ ಮೂಲಕ ಮರು ಟೆಂಡರ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದ್ದರೂ, ಚಾಲ್ತಿಯಲ್ಲಿರುವ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿದ ನಂತರ ಅದನ್ನು ಕಾರ್ಯಗತಗೊಳಿಸಲಾಗಿಲ್ಲ. ಅಂತಿಮವಾಗಿ ಟೆಂಡರ್‌ನ್ನು ಖಾಸಗಿ ಕಂಪನಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.

ಈ ಮೊದಲು ಇದೇ ಪ್ರಕರಣಕ್ಕೆ ಸಂಬಂಧಿಸಿ ಡಿಸೆಂಬರ್ 2ರಂದು ಸಿಬಿಐ ದೆಹಲಿ, ನೋಯ್ಡಾ, ಚಂಡೀಗಢ ಮತ್ತು ಶಿಮ್ಲಾದ ಆರು ಸ್ಥಳಗಳಲ್ಲಿ ಶೋಧ ನಡೆಸಿತ್ತು. ಇದಲ್ಲದೆ ಜನವರಿ 29, 2024ರಂದು ಸಿಬಿಐ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ಸುಮಾರು 8 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. 21ಲಕ್ಷಕ್ಕೂ ಹೆಚ್ಚು ನಗದು ಜೊತೆಗೆ ಡಿಜಿಟಲ್ ಸಾಧನಗಳು, ಕಂಪ್ಯೂಟರ್‌ಗಳು, ದಾಖಲೆಗಳನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.

ಮೋದಿ, ಬಿಜೆಪಿ ಸರಕಾರವನ್ನು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದ್ದ ಸತ್ಯಪಾಲ್ ಮಲಿಕ್

2024 ರ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಮೋದಿ ದೇಶದಲ್ಲಿ ಯಾವುದೇ ರೀತಿಯ ಅನಾಹುತ ಮಾಡಿಸಬಹುದು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಈ ಮೊದಲು ಪುಲ್ವಮಾ ದಾಳಿ ಬಗ್ಗೆ ಮೋದಿ ಸರಕಾರದ ಬಗ್ಗೆ ಗಂಭೀರವಾದ ಆರೋಪವನ್ನು ಮಾಡಿದ್ದ ಸತ್ಯಪಾಲ್ ಮಲಿಕ್‌, ಪುಲ್ವಾಮಾ ದಾಳಿಗೂ ಮೊದಲು ಸಿಆರ್‌ಪಿಎಫ್ ಯೋಧರ ಸಾಗಣೆಗೆ ಐದು ವಿಮಾನಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ, ಗೃಹ ಸಚಿವಾಲಯವು ಅದನ್ನು ಒದಗಿಸಲಿಲ್ಲ. ಅಲ್ಲದೆ ಅಲ್ಲಿ ಇನ್ನೂ ಹಲವು ಲೋಪಗಳಾಗಿದ್ದು, ರಸ್ತೆ ಮಾರ್ಗವಾಗಿ ತೆರಳುವ ವಾಹನಗಳನ್ನು ತಪಾಸಣೆ ಮಾಡಲು ಯಾವುದೇ ಗಸ್ತು ವಾಹನಗಳಾಗಲಿ, ತಪಾಸಣಾ ಠಾಣೆಗಳಾಗಲಿ ಇರಲಿಲ್ಲ ಎಂದು ಸತ್ಯಪಾಲ್ ಮಲಿಕ್ ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕರೆ ಮಾಡಿ, ಸರ್ಕಾರದ ಲೋಪಗಳ ಕುರಿತು ಏನೂ ಮಾತಾಡಬಾರದೆಂದು ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕರೆ ಮಾಡಿ ಮೌನವಾಗಿರುವಂತೆ ಸೂಚಿಸಿದ್ದರು ಎಂದು ಹೇಳಿದ್ದರು.

ಇದಲ್ಲದೆ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಕೇಂದ್ರ ಸರಕಾರವನ್ನು ತರಾಟೆಗೆ ತಗೆದುಕೊಂಡಿದ್ದರು. ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಿ ಎಂದು ಮೋದಿ ಅವರಿಗೆ ಸಲಹೆ ನೀಡಿದಾಗ, ಅವರು ನನಗಾಗಿ ಸತ್ತರೇ? ನಾನ್ಯಾಕೆ ಶ್ರದ್ಧಾಂಜಲಿ ಸಲ್ಲಿಸಲಿ ಎಂದು ಮೋದಿ ಹೇಳಿದ್ದರು ಎಂದು ಮಲಿಕ್ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಣಿಪುರ ಹಿಂಚಾರದ ಬಗ್ಗೆಯೂ ಕೇಂದ್ರ ಸರಕಾರವನ್ನು ಟೀಕಿಸಿ ಹೇಳಿಕೆ ನೀಡಿದ್ದರು

Related Articles

Back to top button