ವಾಟಾಳ್ ನೇತೃತ್ವದಲ್ಲಿ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವ ಬೃಹತ್ ಮೆರವಣಿಗೆ

Views: 0
ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ಕನ್ನಡ ಪರ ಸಂಘಟನೆಗಳ ಸಾವಿರಾರು ಮುಖಂಡರು ಬೃಹತ್ ಮೆರವಣಿಗೆ ಆರಂಭಿಸಿದ್ದಾರೆ.
ನಗರದಲ್ಲಿಂದು ಮೈಸೂರು ಬ್ಯಾಂಕ್ ವೃತ್ತದಿಂದ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವ ಬೃಹತ್ ಮೆರವಣಿಗೆ ನಡೆಯಿತು. ಸಂಜೆಯೊಳಗೆ ಮಂಡ್ಯ ಮಾರ್ಗವಾಗಿ ಕೆಆರ್ಎಸ್ ತಲುಪಲಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ ಜಲಾಶಯಗಳಲ್ಲಿ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಹೇಗೆ?. ಇದನ್ನು ಮನವರಿಕೆ ಮಾಡಿಕೊಡಲು ಬೆಂಗಳೂರಿನಿಂದ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮಾರ್ಗವಾಗಿ ಕನ್ನಡ ಸಂಘಟನೆಗಳ ಒಕ್ಕೂಟದಿಂದ ವಾಹನಗಳ ಮೆರವಣಿಗೆ ಆರಂಭಿಸಲಾಗಿದ್ದು, ಸಂಜೆ ವೇಳೆಗೆ ಕೆಆರ್ಎಸ್ ಜಲಾಶಯ ತಲುಪಿ ಪ್ರತಿಭಟನಾ ಸಭೆ ನಡೆಸಲಾಗುತ್ತದೆ ಎಂದರು.
ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮತ್ತು ತಮಿಳುನಾಡಿಗೆ ಸ್ಪಷ್ಟ ಸಂದೇಶ ನೀಡಲು ರಾಜ್ಯ ಸರಕಾರ ತಕ್ಷಣವೇ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕೆಂದ ಅವರು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಕರ್ನಾಟಕದ ಕಾವೇರಿ ಜಲಾಶಯಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ ಮಾಹಿತಿ ತಿಳಿದುಕೊಳ್ಳಬೇಕು. ಬಳಿಕ ಕಾವೇರಿ ನೀರು ಬಿಡುಗಡೆ ಬಗ್ಗೆ ಬೇಡಿಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರವು ಬರಗಾಲದಂತಹ ಸಂಕಷ್ಟದ ಕಾಲದಲ್ಲಿ ಕಾವೇರಿ ಜಲ ವಿವಾದ ಸಮಸ್ಯೆ ಬಗೆಹರಿಸಲು ಕೇಂದ್ರ ಅಧ್ಯಯನ ತಂಡವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕಳುಹಿಸಬೇಕು. ಈ ತಂಡಗಳು ಕಾವೇರಿ ಜಲಾಶಯಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ನೀರು ಬಿಡುಗಡೆ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಬೃಹತ್ ಮೆರವಣಿಗೆಯಲ್ಲಿ ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಮೂರ್ತಿ, ಗಿರೀಶ್ ಗೌಡ ಸೇರಿದಂತೆ ಪ್ರಮುಖರಿದ್ದರು.