ಮಂಡ್ಯ ಸುಮಲತಾ ಎದುರು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಆಗ್ತಾರಾ ಡಾ.ಮಂಜುನಾಥ್?

Views: 49
ಮಂಡ್ಯ: ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರು ಮಂಡ್ಯ ಲೋಕಸಭಾ ಚುನಾವಣೆಯಿಂದ ಸ್ಪರ್ಧಿಸುತ್ತಾರಾ? ಮಂಡ್ಯ ಜೆಡಿಎಸ್ ನಾಯಕರ ನಡೆ ಈ ರೋಚಕ ಸುಳಿವು ನೀಡಿದ್ದು, ಮಂಜುನಾಥ್ ಅವರು ಮಂಡ್ಯದ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯೇ ಆಗಲಿ ಎಂದು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಅವರು ಬಹಿರಂಗವಾಗಿ ಇಂತಹದೊಂದು ಹೇಳಿಕೆ ನೀಡಿದ್ದಾರೆ. ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟ್ಟರಾಜು ಅವರು ಆರೋಗ್ಯ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅಪಾರ ಸಾಧನೆ ಮಾಡಿದ್ದಾರೆ. ಅವರು ಮೂಲತಃ ಹಾಸನ ಜಿಲ್ಲೆಯವರಾದ್ರೂ ಅವರ ರೈಸ್ಮಿಲ್, ತೋಟ, ಭೂಮಿ ಇರೋದೆಲ್ಲಾ ಮಂಡ್ಯ ಜಿಲ್ಲೆಯಲ್ಲಿ. ಅವರು ಓದಿದ್ದು ಅವರ ಸಂಬಂಧಿಕರು ಇರೋದು ಕೂಡ ಮಂಡ್ಯ ಜಿಲ್ಲೆಯಲ್ಲಿ. ಹೀಗಾಗಿ ಮಂಜುನಾಥ್ ಅವರೇ ಮಂಡ್ಯದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಲಿ ಎಂದಿದ್ದಾರೆ.
ಡಾ. ಸಿ.ಎನ್ ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿ ದೇಶ, ವಿದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಮಂಜುನಾಥ್ ಅವರೇ ಮಂಡ್ಯ ಲೋಕಸಭೆ ಅಭ್ಯರ್ಥಿ ಆಗಲಿ. ಚುನಾವಣೆಯಲ್ಲಿ ಗೆದ್ದು ಕೇಂದ್ರ ಆರೋಗ್ಯ ಸಚಿವರಾದರೆ ಅವರ ಸೇವೆ ಇಡೀ ರಾಷ್ಟ್ರಕ್ಕೂ ಸಿಗಲಿದೆ. ಈ ನಿಟ್ಟಿನಲ್ಲಿ ನಿರ್ಮಲಾನಂದನಾಥ ಶ್ರೀಗಳು ಆಶೀರ್ವಾದ ಮಾಡಬೇಕು ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ಮಧ್ಯೆ ಜೆಡಿಎಸ್ ನಾಯಕರು ಡಾ.ಸಿ.ಎನ್ ಮಂಜುನಾಥ್ ಅವರ ಹೆಸರನ್ನು ಎಳೆದು ತಂದು ಅಚ್ಚರಿ ಮೂಡಿಸಿದ್ದಾರೆ. ಅಂತಿಮವಾಗಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಯಾರು ಸ್ಪರ್ಧಿಸುತ್ತಾರೆ. ಸುಮಲತಾ ಅಂಬರೀಶ್ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ ಎದುರಾಳಿ ಯಾರಾಗ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ