ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

Views: 43
ಕನ್ನಡ ಕರಾವಳಿ ಸುದ್ದಿ: ಶೌಚಾಲಯದ ಕಿಟಕಿಗೆ ಶಾಲಿನಲ್ಲಿ ನೇಣು ಬಿಗಿದುಕೊಂಡು ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣಾ ಕಾಯಿದೆಯಡಿ( ಪೋಕ್ಸೋ) ಬುಧವಾರ ಬಂಧನಕ್ಕೆ ಒಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಮಾರಿಗುಡಿ ದೇವಸ್ಥಾನದ ಬಳಿ ನಿವಾಸಿ ಪ್ರಕಾಶ್ ಗೋಪಾಲ ಮೂಲ್ಯ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಜೈಲಿನ ಬಿ. ಬ್ಯಾರಕ್ ನ ಶೌಚಾಲಯದ ಕಿಟಕಿಯ ಸರಳುಗಳಿಗೆ ಆರೋಪಿ ಶಾಲಿನಿಂದ ನೇಣು ಬಿಗಿದುಕೊಂಡಿದ್ದನ್ನು ಜೈಲಿನ ಭದ್ರತಾ ಸಿಬ್ಬಂದಿ ಗಮನಿಸಿದ್ದರು. ತಕ್ಷಣವೇ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಅಸು ನೀಗಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ತಿಳಿಸಿದರು.
ಕೆಲವು ದಿನಗಳಿಂದ ಮಾನಸಿಕವಾಗಿ ಕುಸಿದಿದ್ದ ಪ್ರಕಾಶ್ ಸರಿಯಾಗಿ ಊಟ ಕೂಡ ಮಾಡುತ್ತಿರಲಿಲ್ಲ. ಪ್ರಕರಣದಲ್ಲಿ ಸಿಲುಕಿದ ಬೇಸರದಲ್ಲಿ ಇರುತ್ತಿದ್ದ ಎಂದು ಜತೆಯಲ್ಲಿದ್ದವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ
ಭಾರತೀಯ ನಾಗರಿಕ ಸಂಹಿತೆ (ಬಿಎನ್ಎಸ್)ನ ಸೆಕ್ಷನ್ 65ರ 4 ಮತ್ತು 65ರಡಿ ಪೋಕ್ಸೊ ಕಾಯ್ದೆಯಡಿ ಆರೋಪಿ ಬಂಧಿತನಾಗಿದ್ದು, ವಿಚಾರಣಾಧೀನ ಕೈದಿಯಾಗಿ ಜೈಲಿಗೆ ದಾಖಲಾಗಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಮಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.