ಬಾಲಕನನ್ನು ಮರಕ್ಕೆ ಕಟ್ಟಿ, ಗುಪ್ತಾಂಗಕ್ಕೆ ಕೆಂಪಿರುವೆ ಬಿಟ್ಟು ಹಿಂಸೆ; 9 ಮಂದಿ ವಿರುದ್ಧ ಎಫ್ಐಆರ್

Views: 181
ಕನ್ನಡ ಕರಾವಳಿ ಸುದ್ದಿ: ಕಳ್ಳತನ ಸೇರಿದಂತೆ ಅಸಭ್ಯ ವರ್ತನೆ ತೋರಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರ ಬಳಿ ಇರುವ ಅಸ್ತಾಪನಹಳ್ಳಿಯಲ್ಲಿನಡೆದಿದೆ.
ಬಾಲಕನಿಗೆ ಚಿತ್ರಹಿಂಸೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಲ್ಲದೆ ಹಲ್ಲೆಗೊಳಗಾದ ಬಾಲಕನಿಗೆ ಸಹಾಯ ಮಾಡಿದ್ದ ಮತ್ತೋರ್ವ ಬಾಲಕನಿಗೂ ಈ ಗುಂಪು ಹಲ್ಲೆ ಮಾಡಿದೆ.
ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಡ್ರಿಪ್ ಪೈಪ್ನಿಂದ ಮನಬಂದಂತೆ ಥಳಿಸಿ, ಗುಪ್ತಾಂಗಕ್ಕೆ ಕೆಂಪಿರುವೆ ಬಿಟ್ಟು ಹಿಂಸೆ ನೀಡಲಾಗಿದೆ. ಹಕ್ಕಿ-ಪಿಕ್ಕಿ ಜನಾಂಗದ ಬಾಲಕನ ಮೇಲೆ ಅದೇ ಜನಾಂಗದ ಯುವಕರು ಹಲ್ಲೆ ನಡೆಸಿದ್ದಾರೆ. ಇವರು ಗಿಡಮೂಲಿಕೆ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಹಕ್ಕಿ – ಪಿಕ್ಕಿ ಜನಾಂಗದವರಾಗಿದ್ದಾರೆ ಎಂದು ಚನ್ನಗಿರಿ ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಬಾಲಕನ ತಾತ ನೀಡಿದ ದೂರಿನ ಆಧಾರದ ಮೇಲೆ ಸುಭಾಷ್ (23), ಲಕ್ಕಿ(21), ದರ್ಶನ್ (22), ಪರಶು (25), ಶಿವದರ್ಶನ್ (23), ಹರೀಶ್ (25), ಪಟ್ಟಿ ರಾಜು(20), ಭೂಣಿ (18), ಸುಧನ್ ಅಲಿಯಾಸ್ ಮಧುಸೂಧನ್ (32) ವಿರುದ್ಧ ಚನ್ನಗಿರಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದವರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.