ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ: ಸಂಭ್ರಮದ ದೀಪಾವಳಿ ಆಚರಣೆ
"ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ, ಕತ್ತಲೆಯನ್ನು ಬೆಳಕಿನಿಂದ ತೊಡೆದು ಹಾಕಬೇಕು ಎಂಬ ಸಂದೇಶವನ್ನು ಮಕ್ಕಳಿಗೆ ನೀಡಲಾಯಿತು.

Views: 66
ಕುಂದಾಪುರ: ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಎನ್ನುವಂತೆ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಮಕ್ಕಳೆಲ್ಲರೂ ಹೊಸ ಬಟ್ಟೆಯನ್ನು ತೊಟ್ಟು ಶಾಲೆಗೆ ಬಂದಿದ್ದರು. ಈ ಮಂಗಳಕರ ಅವಧಿಯಲ್ಲಿ ಜೀವನದಲ್ಲಿ ಸಂಪತ್ತು ಹಾಗೂ ಯಶಸ್ಸು ಮತ್ತು ಸಮೃದ್ಧಿಯನ್ನು ತರುವ ಲಕ್ಷ್ಮೀ ಪೂಜೆಯನ್ನು ಮಾಡಲಾಯಿತು. ವಿದ್ಯಾರ್ಥಿಗಳಿಗೆ ನೈಸರ್ಗಿಕವಾಗಿ ದೊರಕುವ ವಿವಿಧ ವಸ್ತುಗಳಿಂದ ಗೂಡು ದೀಪ ತಯಾರಿ, ಹಣತೆ ತಯಾರಿ, ಗ್ರೀಟಿಂಗ್ ಕಾರ್ಡ್ ತಯಾರಿ ಹಾಗೂ ತರಗತಿ ಅಲಂಕಾರ ಹೀಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಮತ್ತು ನಾವು ಕತ್ತಲೆಯನ್ನು ಬೆಳಕಿನಿಂದ ತೊಡೆದು ಹಾಕಬೇಕು ಎಂಬ ಸಂದೇಶವನ್ನು ಮಕ್ಕಳಿಗೆ ನೀಡಲಾಯಿತು.
ಸಮಾರಂಭದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ, ಶಾಲಾ ಆಡಳಿತ ನಿರ್ದೇಶಕರಾದ ಶ್ರೀಯುತ ಪ್ರಕಾಶ್ ಶೆಟ್ಟಿ, ಶಾಲಾ ಪ್ರಾಂಶುಪಾಲರಾದ ಮಮತಾ ಪೂಜಾರಿ ,ಶಾಲಾ ಆಡಳಿತಾಧಿಕಾರಿ ಆಶಾ ಶೆಟ್ಟಿ, ಬೋಧಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ವಿವಿಧ ಸ್ಪರ್ಧೆಗಳ ನಿರ್ಣಾಯಕರಾಗಿ ಶ್ರೀಮತಿ ಕವನ ಪೂಜಾರಿ,ಶ್ರೀಮತಿ ಸುಚೇತ ರಾಘವೇಂದ್ರ, ಶ್ರೀಮತಿ ಯಕ್ಷತಾ ರಾಜೇಶ್ ಆಗಮಿಸಿದರು.