ಇತರೆ

ದೇವಸ್ಥಾನದಿಂದ ವಾಪಸ್ ಬರುವಾಗ ದುರ್ಘಟನೆ: ಟಿಪ್ಪರ್​, ಲಾರಿ ಕ್ರೂಸರ್ ಮಧ್ಯೆ ಸರಣಿ ಅಪಘಾತ; 7 ಮಂದಿ ಸಾವು

Views: 0

ಟಿಪ್ಪರ್​, ಲಾರಿ ಹಾಗೂ ಕ್ರೂಸರ್ ನಡುವೆ ಭೀಕರ ಸರಣಿ ಅಪಘಾತದಲ್ಲಿ ಓರ್ವ ಬಾಲಕ, ಮಹಿಳೆಯರು ಸೇರಿದಂತೆ 7 ಜನರು ಮೃತಪಟ್ಟಿರುವ ಹೊಸಪೇಟೆ ತಾಲೂಕಿನ ವ್ಯಾಸನಕೇರಿ ಬಳಿ ರಾಷ್ತ್ರೀಯ ಹೆದ್ದಾರಿ 50ರಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಹೊಸಪೇಟೆಯ ಉಕ್ಕಡ ಕೇರಿಯ ಉಮಾ (45), ಕೆಂಚವ್ವ (80), ಭಾಗ್ಯ (32), ಅನಿಲ (30), ಗೋಣಿ ಬಸಪ್ಪ (65), ಭೀಮಲಿಂಗಪ್ಪ (50), ಬಾಲಕ ಯುವರಾಜ (4) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ,ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಮೃತರ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.

ಅಪಘಾತದಲ್ಲಿ ಕ್ರೂಸರ್‌ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ. ಟಿಪ್ಪರ್​ ಮುಂಭಾಗ ಜಖಂಗೊಂಡಿದ್ದು, ಕಳಚಿ ಬಿದ್ದಿದೆ. ಮತ್ತೊಂದು ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಕ್ರೂಸರ್​ ವಾಹನದಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಕುಟುಂಬಸ್ಥರು, ಮರಳಿ ಬರುವಾಗ ದುರ್ಘಟನೆ ನಡೆದಿದೆ‌. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಖಂಗೊಂಡ ವಾಹನಗಳಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ರೂಸರ್‌ ವಾಹನದಲ್ಲಿ ಒಟ್ಟು 13 ಜನರಿದ್ದರು ಎಂಬ ಮಾಹಿತಿ ಇದ್ದು, ಕೆಲ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.ಗಾಯಾಳುಗಳನ್ನು ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ವಿಜಯನಗರ ಎಸ್‌ಪಿ ಶ್ರೀಹರಿಬಾಬು ಮೃತದೇಹಗಳನ್ನು ಹೊರತೆಗೆಯಲು ಸಿಬ್ಬಂದಿಗೆ ಸಹಕಾರ ನೀಡಿದ್ದಾರೆ. ಸ್ಥಳೀಯರು ಕೂಡ ಪೊಲೀಸರ ಕಾರ್ಯಾಚರಣೆಗೆ ನೆರವಾದರು.

ಸದ್ಯ ಅಪಘಾತಕ್ಕೆ ಕಾರಣ ಏನೆಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ

Related Articles

Back to top button