‘ಚಂದಕಿಂತ ಚಂದ.. ನೀನೇ ಸುಂದರ’.. ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ

Views: 63
ಸುದೀಪ್ ‘ಸ್ಪರ್ಶ’ ಸಿನಿಮಾದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’, ‘ಚಂದಕಿಂತ ಚಂದ ನೀನೇ ಸುಂದರ..’ ಹಾಡಿದ ಜನಪ್ರಿಯ ಗಾಯಕ ಪಂಕಜ್ ಉಧಾಸ್ ಅವರು ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 73ರ ಪ್ರಾಯದ ಅವರು ಇಂದು (ಫೆ.26) ನಿಧನರಾದರು.
ಅವರ ನಿಧನದ ಸುದ್ದಿಯನ್ನು ಪುತ್ರಿ ನಯಾಬ್ ಉಧಾಸ್ ಖಚಿತಪಡಿಸಿದ್ದಾರೆ. 1980ರ ದಶಕದಲ್ಲಿ ಪಂಕಜ್ ಉಧಾಸ್ ಅವರು ಗಝಲ್ ಗಾಯನದ ಮೂಲಕ ಫೇಮಸ್ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಅವರು ಧ್ವನಿ ನೀಡಿದ್ದರು. ಕಿಚ್ಚ ಸುದೀಪ್ ಅಭಿನಯದ ‘ಸ್ಪರ್ಶ’ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರನ್ನು ಅವರು ರಂಜಿಸಿದ್ದರು
ಪಂಕಜ್ ಉಧಾಸ್ ಅವರ ಅಗಲಿಕೆಗೆ ಕನ್ನಡ ನಾಡಿನ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ.
ಹಲವಾರು ಆಲ್ಬಂ ಗೀತೆಗಳಿಗೆ ಪಂಕಜ್ ಉಧಾಸ್ ಧ್ವನಿಯಾಗಿದ್ದರು. ಅವರದ್ದು ಸಂಗೀತಗಾರರ ಕುಟುಂಬ. ಅವರ ಸಹೋದರರಾದ ಮನ್ಹರ್ ಉಧಾಸ್, ನಿರ್ಮಲ್ ಉಧಾಸ್ ಅವರು ಕೂಡ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. 1986ರಲ್ಲಿ ತೆರೆಕಂಡ ‘ನಾಮ್’ ಸಿನಿಮಾದಲ್ಲಿನ ‘ಚಿಟ್ಟಿ ಆಯಿ ಹೈ..’ ಹಾಡಿಗೆ ಧ್ವನಿ ನೀಡುವ ಮೂಲಕ ಪಂಕಜ್ ಉಧಾಸ್ ಅವರು ಬಹಳ ಜನಪ್ರಿಯತೆ ಪಡೆದರು. ಸಂಜಯ್ ದತ್ ಅಭಿನಯದ ಆ ಸಿನಿಮಾದಲ್ಲಿ ಪಂಕಜ್ ಅವರು ಗಾಯಕನಾಗಿ ಕಾಣಿಸಿಕೊಂಡಿದ್ದರು.
2006ರಲ್ಲಿ ಪಂಕಜ್ ಉಧಾಸ್ ಅವರಿಗೆ ಭಾರತ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೇ, ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಪಂಕಜ್ ಉಧಾಸ್ ಅವರನ್ನು ಅರಸಿ ಬಂದಿದ್ದವು. ಭಾರತದ ಮಾತ್ರವಲ್ಲದೇ ವಿದೇಶದ ಹಲವು ವೇದಿಕೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿದ್ದರು. ಲೆಜೆಂಡರಿ ಗಾಯಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದರು