ಉಡುಪಿ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ ಸೆರೆ

Views: 725
ಉಡುಪಿ: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯ ಹತ್ಯೆ ಮಾಡಿರುವ ಘಟನೆ ಕಾರ್ಕಳ ತಾಲೂಕು ಅಜೆಕಾರಿನಲ್ಲಿ ನಡೆದಿದೆ. 44 ವರ್ಷದ ಬಾಲಕೃಷ್ಣ ಪೂಜಾರಿ ಮೃತ ವ್ಯಕ್ತಿ
ಬಾಲಕೃಷ್ಣ ಪೂಜಾರಿ ಅವರು ಕಳೆದ 25 ದಿನಗಳಿಂದ ಜ್ವರ, ವಾಂತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಮಾಲೆ ರೋಗ ಇದೆ ಎಂದು ಹೇಳಿ ಬಾಲಕೃಷ್ಣ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದರೆ ಕಳೆದ ಅಕ್ಟೋಬರ್ 20 ರಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕೃಷ್ಣ ಸಾವನ್ನಪ್ಪಿದ್ದಾರೆ.
ಬಾಲಕೃಷ್ಣ ಪೂಜಾರಿ ಅವರ ಸಾವು ಅನುಮಾನಸ್ಪದವಾಗಿದ್ದು, ಕುಟುಂಬಸ್ಥರು ಪತ್ನಿ ಪ್ರತಿಮಾ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಬಾಲಕೃಷ್ಣ ಸಹೋದರ ರಾಮಕೃಷ್ಣ ಎಂಬುವವರು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರತಿಮಾಳ ಸಹೋದರ ಸಂದೀಪ್ಗೂ ತನ್ನ ಬಾವನ ಸಾವಿನ ಬಗ್ಗೆ ಸಂಶಯ ಇತ್ತು. ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯ ನಡೆ ಸಾಕಷ್ಟು ಅನುಮಾನ ಮೂಡಿಸಿತ್ತು.
ಸಾವು ಹೇಗಾಯಿತು?
ಬಾಲಕೃಷ್ಣ ಪೂಜಾರಿ ಅವರ ಸಾವಿನ ಬಳಿಕ ಪ್ರತಿಮಾ ತನ್ನ ಸಹೋದರ ಸಂದೀಪ ಜೊತೆ ಮಾಹಿತಿ ಬಾಯಿ ಬಿಟ್ಟಿದ್ದರು. ಪ್ರಿಯಕರ ದಿಲೀಪ್ ಜೊತೆ ಸೇರಿ ಬೆಡ್ ಶೀಟ್ನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಪ್ರತಿಮಾ ಒಪ್ಪಿಕೊಂಡಿದ್ದಾರೆ. ಬಾಲಕೃಷ್ಣ ಪೂಜಾರಿ ಅವರಿಗೆ ಊಟದಲ್ಲಿ ವಿಷ ಬೆರೆಸಿರುವ ಅನುಮಾನವೂ ಇದೆ. ಅಜೆಕಾರು ಪೊಲೀಸರು ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.